ಇಂದೆಂಬ ಕರೆದನಿಯ ಉದ್ಗಾರ….!
ನಭವ ನೋಡಿ ಬರಿ ಖಾಲಿ ಹಾಳೆಯೆಂದು
ಒಂದೊಮ್ಮೆ ಖಿನ್ನತೆಯಲಿ
ಹೊರಟು ಹೋದ ನೆನಪು
ಆ ಕ್ಷಣದಿ ಬಂದ ತಂಗಾಳಿಯೂ
ಅದೇಕೋ ಬಿಸಿಬಯಲಲಿ ನಿಲಿಸಿ
ತುಸು ಹುರಿದು ಬೇಯಿಸಿದ ಭಾವದ ಒಡಪು.!
ಹುಚ್ಚು ಅಲೆಯಾಗಿ ಮನದಿ ಬಡಿದು
ದ್ವಂದ್ವದ ಜೊತೆ ಮೈದಾಳಿ ನಿಂತು
ಕರೆಯ ಕೇಳುವ ಮುನ್ನ
ನಿನ್ನೆಯೊಳು ಕೂಡಿಹಾಕಿ
ನಾಳೆಯೆನ್ನುವ ನಂಬಿಕೆ
ಸಿಗದಂತೆ ಕಟ್ಟಿಹಾಕಿ.,
ಪರಾಮರ್ಶೆಗೆ ನಿಲುಕದಂತೆ
ತನುವೊಳಗೆ ಸಿಲುಕಿ
ಚೀರಾಡುವ ಗೋಜಿಗೂ ಹೋಗದೆ
ಮೌನವನು ಮೌನದಲೇ ಸಾಯಿಸಿ
ಪೇಚಾಡುತ ಸುಡುವ ಜ್ವಾಲೆಯ ಮೇಲೆ
ಕೂತು ನಡೆದುಬಿಡುವ
ಎಂಬ ಹುಚ್ಚು ಭಾವದ ಮಥನ..!
ಖಿನ್ನ ಕುಹಕದ ಸಾಂಗತ್ಯದಲಿ
ಇಹವ ಮರೆತ ಮನವ
ಸಾಮೀಪ್ಯಿಸಿ, ಸಾವರಿಸಿ
ಲೌಕಿಕ ಸಾನೀಧ್ಯಕೆ ಕರೆತಂದು
ನೀಡಿ ಅದಕೊಂದಷ್ಟು
ಅಣಿ ಅಕ್ಷರಗಳ ಆಕಾರ,
ಮತ್ತೆ ಮೈಗೊಡವಿ ನಿಲ್ಲುವಂತೆ ಮಾಡಿದ್ದು
ಇಂದೆಂಬ ಕರೆದನಿಯ ಉದ್ಗಾರ.!
— ರಾಘವೇಂದ್ರ ಹೆಗಡೆ
Posted on 26/08/2010, in ಹನಿಹರವು (ಕವಿತೆ) and tagged ಇಂದು, ಕವಿತೆ, ನಾಳೆ, ನಿನ್ನೆ. Bookmark the permalink. 3 ಟಿಪ್ಪಣಿಗಳು.
Nice ! Thanks
LikeLike
ಕವಿತೆ.. ಕವಿತೆ.. ನೀನೇಕೆ ‘ರಾಗನೌಕೆ’ ಯಲ್ಲಿ ಕುಳಿತೆ..!
ಕವಿತೆ.. ಕವಿತೆ.. ನೀನೇಕೆ ‘ರಾಘು’ ವಿನಲ್ಲಿ ಬೆರೆತೆ..!!
LikeLike
good one
LikeLike