Monthly Archives: ಜುಲೈ 2012
ಮೂರುಸಂಜೆ ದೀಪ
ಚೂರು ಚೂರಾಗಿ ಬಿಕ್ಕಿ ಹಾರುವ
ಮೋಡ ನಿನ್ನ ಜಿಟಿಜಿಟಿ
ಒಂಟಿಹಾದಿಗೆ ಮೂರುಸಂಜೆಯ ದೀಪ
ಅನಂತದ ತಿಳಿನೀಲಿ ಬಣ್ಣದಂತೆ ಹೊಳೆದು
ಟೆರೆಸ್ ಹತ್ತಿ ಕೂತು ನಿನ್ನ ಅಣಕಿಸುವ
ಡ್ಯೂರಶೈನ್ ಶೀಟು
ಒಂದು ಹುಲ್ಲೂ ಹುಟ್ಟದ
ಕಾಂಕ್ರೀಟು ರೋಡುಗಳನೆಲ್ಲ
ಬೈಪಾಸ್ ಹಾಯದೇ ಕ್ಷಮಿಸಿಬಿಡು.
ಆ ಬೋಳುಗದ್ದೆಯಲ್ಲಿ ಜಮಾನದಲ್ಲಿ
ಭತ್ತ ಬೆಳೆಯುತ್ತಿದ್ದರು
ಅಕೋ ಆ ಹಣೆಪಟ್ಟಿ
ಹಂಗಿರದ ಬೆಟ್ಟ ಮತ್ತಲ್ಲಿ
ಹರಿವ ಅಘನಾಶಿನಿ ಮಾತ್ರ
ಈಗ ಜೀವಂತ ಸಾಕ್ಷಿ
ವರವಾಗಿ ಸುರಿದುಬಿಡು
ಇಲ್ಲೇ ಆಚೀಚೆಯ
ಮಣ್ಣ ಕಣಕಣದ ಗಂಧ ಸೇಚುವಂತೆ
ಇರು ಒಂದೆರಡು ನಿಮಿಷ
ಉಳಿದರ್ಧ ಕಪ್ಪು ಚಹಾ ಹೀರಿ
ಈ ಮಾಡಿನಿಂದಾಚೆ ನಾನೂ ಬರುವೆ
ಬೀಸದ ನಿರ್ಜೀವ ಗಾಳಿ
ಪಂಜಿಯಲಿ ಮೊಳಕೆಯೊಡೆಯಲಿ
ಕವಿತೆಯಾದರೂ ಒಂದು
ಜತನವಾಗಿ, ಪತನವಾಗಿ,
ಇಲ್ಲ ಅನಾಥವಾಗಿ
–ರಾಘವೇಂದ್ರ ಹೆಗಡೆ