ಕರ್ಮ: ಒಂದು ಅವಲೋಕನ

karma by karnam pavan prasad
ವಿದ್ಯೆ ಕಲಿಯುವುದು ಅತ್ಯವಶ್ಯ. ಜವಾಬ್ದಾರಿಯುತ ಸತ್ಪ್ರಜೆಯಾಗುವುದೂ ಅಷ್ಟೇ ಮುಖ್ಯ. ಆದರೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಹಾನಗರ ಸೇರಿ ತೀರ ವೈಭೋಗದ ಜೀವನ ನಡೆಸಬೇಕೆಂಬ ಭರದಲ್ಲಿ ತಾವೆತ್ತ ಸಾಗುತ್ತಿದ್ದೇವೆ ಎಂಬುದರ ಪರಿವೆ ಇಂದು ಅದೆಷ್ಟೋ ಯುವಜನರಲ್ಲಿ ಇಲ್ಲವಾಗಿದೆ. ವೀಕೆಂಡ್ ಮಸ್ತಿಯ ಹೆಸರಲ್ಲಿ ಸಹವಾಸದೋಷದಿಂದ ಅದೆಂಥೆಂತದೋ ದುಶ್ಚಟಗಳಿಗೆ ದಾಸರಾಗಿ ಅತ್ತ ಗುರುವೂ ಇಲ್ಲದೇ ಇತ್ತ ಗುರಿಯೂ ಇಲ್ಲದೇ ತ್ರಿಶಂಕು ಸ್ವರ್ಗದಲ್ಲಿ ತೇಲುವ ಅನೇಕ ಜನ ನಮಗೆ ಕಾಣಸಿಗುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ಲಿವಿಂಗ್ ಟುಗೆದರ್ ಪದ್ದತಿ ಇಂದು ಈ ಮಣ್ಣಿನ ಸ್ವಾಸ್ಥ್ಯವ ನ್ನೂ ಕೆಡಿಸುತ್ತಿದೆ. ಇಂತಹ ಅಂಶಗಳನ್ನೊಳಗೊಂಡ ’ಕರ್ಮ’, ಯುವ ಬರಹಗಾರ – ನಾಟಕಕಾರ ಕರಣಂ ಪವನ್ ಪ್ರಸಾದ್ ರ ಚೊಚ್ಚಲ ಕಾದಂಬರಿ.

ತನ್ನ ತಂದೆಯ ಸಾವಿನ ವಿಷಯವನ್ನು ತಿಳಿದ ಸುರೇಂದ್ರ ಬಹುವರ್ಷಗಳ ನಂತರ ಈಗ ತನ್ನ ಹುಟ್ಟೂರಿಗೆ ಬರುತ್ತಾನೆ. ಪುರೋಹಿತರೂ, ವಿದ್ವಾಂಸರೂ ಆಗಿದ್ದ ತಂದೆಯವರ ಅಪರ ಕರ್ಮವನ್ನು ಜ್ಯೇಷ್ಠ ಪುತ್ರನಾದ ಅವನೇ ಮಾಡಬೇಕೆಂದು ನಿರ್ಣಯವಾಗುತ್ತದೆ. ಮುಂದಿನ ಹದಿನೈದು ದಿನ ನಡೆವ ಘಟನೆಗಳೇ ಕಥೆಯ ಹಂದರ. ಬ್ರಾಹ್ಮಣ ಸಮುದಾಯದಲ್ಲಿ ನಡೆವ ಅಪರ ಕ್ರಿಯಾಚರಣೆಯ ವಿಧಾನವನ್ನು ಕಥೆಯ ಸನ್ನಿವೇಶಗಳೊಂದಿಗೆ ಕಟ್ಟಿಕೊಟ್ಟ ಪರಿ ಅದ್ಭುತ. ಕಥೆಗನುಗುಣವಾಗಿ ಅಲ್ಲಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ತಾತ್ಪರ್ಯಗಳನ್ನು ಬಳಸಲಾಗಿದೆ. ಆ ಹದಿನೈದು ದಿನಗಳಲ್ಲಿ ಕಥಾನಾಯಕ ಸುರೇಂದ್ರನ ಮನದಲ್ಲಿ ಉಂಟಾಗುವ ಗೊಂದಲ, ದುಃಖ, ಹೊಯ್ದಾಟ, ಆಸಹಾಯಕತೆ, ಭಯ, ಅಪರಾಧಿ ಭಾವ, ಜಿಜ್ಞಾಸೆ ಮುಂತಾದವೆಲ್ಲ ಕಥೆಯ ವಿವಿಧ ಕೋನಗಳಲ್ಲಿ ಹಾದು ಹೋಗುತ್ತವೆ. ಸಂದರ್ಭೋಚಿತವಾಗಿ ಉಲ್ಲೇಖಿಸಿದ ಗರುಡಪುರಾಣದ ಅರ್ಥ ವಿವರಣೆ ಓದಲು ಮತ್ತಷ್ಟು ಖುಷಿ ಕೊಡುತ್ತದೆ.

ನಾಳೆ ತನ್ನ ಕ್ರಿಯಾಚರಣೆ ಮಾಡುವವರು ಯಾರೂ ಇಲ್ಲ ಎಂಬ ಭಾವನೆ ಸುರೇಂದ್ರನಲ್ಲಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತದೆ ಅಲ್ಲದೇ ತನ್ನ ಮತ್ತು ಪತ್ನಿಯ ಸಂಬಂಧದಲ್ಲಿಲ್ಲದ ನೈತಿಕ ಗಟ್ಟಿತನದ ಬಗ್ಗೆ ಅವಲೋಕಿಸಿ ಭಯ ಮತ್ತು ಹೇಸಿಗೆಯಾಗುತ್ತದೆ. ಅಪರ ಕರ್ಮಗಳೆಲ್ಲ ಮುಗಿದ ಮೇಲೆ ಸುರೇಂದ್ರನಿಗೆ ತಾನು ಕ್ರಿಯಾಚರಣೆ ಮಾಡಿದ್ದು ತನಗೆ ಜನ್ಮವಿತ್ತ ತಂದೆಯದ್ದಲ್ಲ ಎಂಬ ಕಠೋರ ಸತ್ಯದ ಅರಿವಾಗುತ್ತದೆ. ಅಷ್ಟರಲ್ಲಿ ಅವನ ತಮ್ಮ ನರಹರಿ ಅಮ್ಮ ತೀರಿಹೋಗಿಬಿಟ್ಟ ವಿಷಯವನ್ನು ತಿಳಿಸುತ್ತಾನೆ. ಮಹಾನಗರ ಬಿಟ್ಟು ಅಜ್ಞಾತವಾಸಕ್ಕೆ ಬಂದಂತಾಗಿದ್ದವನಿಗೆ ಈಗ ಎಲ್ಲ ಮುಗಿದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಕಸ್ಮಾತಾಗಿ ಮತ್ತೊಂದು ಕರ್ಮ ಬಂಧನ ಕಟ್ಟಿಹಾಕುತ್ತದೆಯೇ ಎಂಬುದನ್ನು ಓದುಗರ ವಿವೇಚನೆಗೆ ಬಿಡಲಾಗಿದೆ.

ಕಥೆಯ ಸಲುವಾಗಿನ ಲೇಖಕರ ಅಧ್ಯಯನವನ್ನು ಮೆಚ್ಚಲೇಬೇಕು. ಅವರು ಹಲವುಕಡೆ ಪಾತ್ರದ ಒಳಹೊಕ್ಕು ಬರುವಲ್ಲಿ ಯಶಸ್ವಿಯಾಗುತ್ತಾರೆ. ಕುತೂಹಲವನ್ನು ಉಳಿಸಿಕೊಂಡು, ಕೊನೆಯವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಕಥೆ ಯಶಸ್ವಿಯಾಗುತ್ತದೆ. ಪ್ರಸಿದ್ದ ಬರಹಗಾರ ಓದುಗರ ಮೇಲೆ ತನ್ನ ಬರವಣಿಗೆಯ ಮೂಲಕ ಪ್ರಭಾವ ಬೀರುವುದು ಸಹಜ. ಹೊಸಬರಲ್ಲಿ ಸೃಜನಶೀಲ ಬರವಣಿಗೆಯ ಸ್ಪುರಣೆಗೆ ಅವು ಅವಶ್ಯ ಕೂಡ. ಅದರಂತೆ ಇಲ್ಲಿ ಭೈರಪ್ಪನವರ ಪ್ರಭಾವ ಲೇಖಕರ ಮೇಲೆ ಆದಂತೆ ಒಮ್ಮೊಮ್ಮೆ ಅನಿಸುತ್ತದೆ. ಯುವ ಬರಹಗಾರರೆಂದರೆ ಮೂಗು ಮುರಿಯುವ ಇಂತಹ ದಿನಗಳಲ್ಲಿ ’ಕರ್ಮ’ ಕನ್ನಡ ಸಾರಸ್ವತ ಲೋಕದಲ್ಲಿ ಹೊಸಬರ ಬಗ್ಗೆ ಭರವಸೆ ಮೂಡಿಸುತ್ತದೆ.

ಪುಸ್ತಕ: ಕರ್ಮ (ಕಾದಂಬರಿ)
ಲೇಖಕರು: ಕರಣಂ ಪವನ್ ಪ್ರಸಾದ್
ಪ್ರಕಾಶನ: Concave Media
ಬೆಲೆ: 125 (ಮೊದಲ ಮುದ್ರಣಕ್ಕೆ ಅನ್ವಯಿಸುವಂತೆ)


— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 12/08/2014, in ಈ ಹೊತ್ತಿಗೆ, ಲೇಖನ, ವಿಮರ್ಶೆ and tagged , , , , , . Bookmark the permalink. 3 ಟಿಪ್ಪಣಿಗಳು.

  1. ಕರಣಂ ಅವರ ಈ ಕಾದಂಬರಿ ದೊರೆಯುವ ಮಳಿಗೆಯನ್ನೂ ಹೆಸರಿಸಿದ್ದರೆ ಚೆಂದಿತ್ತು.

    Like

  2. ಡಾ. ಮಲ್ಲಿನಾಥ ಶಿ. ತಳವಾರ, ರಾವೂರ

    ಯವಜನತೆ ಮಾನಸಿಕವಾಗಿ ಗೊಂದಲದಲ್ಲಿರುವುದನ್ನು ಈ ಕಾದಂಬರಿಯ ಯಥಾವತ್ತಾಗಿ ದಾಖಲಿಸುತ್ತ.

    Like

ಹೇಗಿದೆ ಹೇಳಿ!