ಬ್ಲಾಗ್ ಸಂಗ್ರಹಗಳು

ರಥಬೀದಿ…


ಹಾದಿಯ ಅಂಚು ಸವರುವ ಅಂಗಡಿ ಬಾಗಿಲು, ಅಲ್ಲೇ ಮೆಟ್ಟಿಲು, ಬಾಣಲೆಯಂಥ ದೊಡ್ಡ ಹರಿವಾಣಗಳಲ್ಲೊಂದಿಷ್ಟು ಅರಿಶಿನ, ಕುಂಕುಮ, ಕುಪ್ಪಿಬಣ್ಣ , ಊದುಬತ್ತಿ, ಕರ್ಪೂರ, ಶ್ರೀಗಂಧ, ಚಂದನ ಕೊರಡು, ಬಾಗಿಲ ಬದಿಗೆ ನೇತುಬಿದ್ದ ಬಾಳೆಗೊನೆ, ದೇಗುಲದ ಘಂಟಾನಾದ…. ಇಡೀ ಬೀದಿಗೇ ಒಂದು ಕಂಪು. ತೋರಣದ ಮಾವಿನಫಲ, ಅರಿಶಿನ ಎಲೆ, ತೆಂಗಿನಕಾಯಿ, ಮಲ್ಲಿಗೆ, ಸೇವಂತಿಗೆಯ ಘಮ, ಮಿಟಾಯಿ ಅಂಗಡಿ, ಸೇಬು, ಚಿಕ್ಕು, ದ್ರಾಕ್ಷಿ, ದಾಳಿಂಬೆ, ಸವತೆ, ಹಾಗಲ, ಬೇವು… ಅರೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಇದೇ ಸಂತೆ. ಈ ದಾರಿಯಲ್ಲಿ ಇಂಥವುಗಳ ಸೊಬಗು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟಕ್ಕೂ ನಮ್ಮೂರ ರಥಬೀದಿಯೇನು ತೀರ ಉದ್ದದ್ದೂ, ಅಗಲದ್ದೂ ಅಲ್ಲ. ಒಂದು ತುದಿ ಮಾತ್ರ ಸ್ವಲ್ಪ ವಿಶಾಲ; ಆದರೆ ಮತ್ತೊಂದು ತುದಿ ತೀರ ಕಿರಿದು. ಎಲ್ಲ ಊರಿನ ರಥಬೀದಿಗಳೂ ಬಹುಶ:ಹೀಗೇ ಇರಬಹುದೇನೋ.

ಬಾಲ್ಯದಲ್ಲಿ ಆಟಿಕೆಯೊಂದ ನೋಡಿ ಅಪ್ಪನ ಬಳಿ ಹಟ ಮಾಡಿದ್ದು, ತರಕಾರಿ ಕೈಚೀಲವ ಕೆಡವಿದ್ದು, ತೇರಿಗೆ ಬಾಳೆಹಣ್ಣು ಎಸೆದದ್ದು ಇಂಥ ನೆನಪುಗಳು ಇಲ್ಲಿ ಹಾಯುವಾಗೆಲ್ಲ ಗರಿ ಬಿಚ್ಚುತ್ತವೆ. ಗಮ್ಯ ಕಾಣುವಷ್ಟೇ ಇದ್ದರೂ ತನ್ನೊಡಲಾಳದ ಅಕ್ಷಯ ರಮ್ಯತೆ, ಅದೆಂಥದೋ ಆಪ್ಯಾಯತೆಯಿಂದ ನನ್ನ ಇದು ಸದಾ ಕಾಡುತ್ತಿರುತ್ತದೆ. ಹಾದಿ ಕಿರಿದಾದಷ್ಟೂ ನನಗೆ ಸರಕ್ಕನೆ ಅಪ್ಪನ ನೆನಪಾಗಿಬಿಡುತ್ತದೆ. ತಮ್ಮಾ ಈ ಜೀವನವೇ ಒಂದು ರಥಬೀದಿ ನೋಡು ಎಂದು ಆತ ಒಮ್ಮೆ ನಸುನಕ್ಕಿ ಹೇಳಿದ್ದನ್ನು ಇಂದು ಈ ಬೀದಿಯ ಕಣಕಣವೂ ಪ್ರತಿಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ಅಪ್ಪ ನನ್ನಿಂದ ಕಡೆಯದಾಗಿ ಕೇಳಿದ್ದ ಕವಿಕೆಯೊಂದು ಈಗೇಕೋ ಮತ್ತೆ ನೆನಪಾಗುತ್ತಿದೆ.

ಭರವಸೆಯ ಬೆಳಕೆ, ಜ್ಞಾನಸಿರಿ ಬೆಳಕೆ
ಜಗತುಂಬಿ ಅರಳು ಬಾ ಬೆಳಕೆ
ಮುನ್ನಡೆಸೆನ್ನ ಸನ್ಮಾರ್ಗ ಪಥಕೆ…

ಚಿತ್ರವೊಂದನ್ನು ತೆಗೆಯಬೇಕು ಎಂದುಕೊಂಡು ಬಂದಿದ್ದೆ. ಆದರೆ ಈ ರಥಬೀದಿಯ ಸೊಬಗ ಕೇವಲ ಒಂದು ಚೌಕಟ್ಟಲ್ಲಿ ಬಂಧಿಸುವುದು ಅಷ್ಟು ತರವಲ್ಲ ಎಂದೆನಿಸಿ, ಕ್ಯಾಮರಾವನ್ನು ಪುನ: ನನ್ನ ಸಿ.ಡಿ.ಹಂಡ್ರೆಡ್ ನ ಪೆಟ್ಟಿಗೆಯಲ್ಲಿ ತುರುಕಿ ಈಗ ಇಲ್ಲೇ ಕೈಚೀಲ ಹಿಡಿದು ಅಲೆಯುತ್ತಿದ್ದೇನೆ. ಒಂದಷ್ಟು ಹೂವು, ಹಣ್ಣು, ಕಡ್ಡಿ-ಕರ್ಪೂರ ಜೊತೆಗೆ ಮತ್ತೊಂದಷ್ಟು ನೆನಪುಗಳನ್ನು ತುಂಬಿ ಒಯ್ಯಬೇಕು.

***

ಈ ಕವಿತೆಯನ್ನೂ ಓದಿ 🙂

ಮನೆ-ಮನಗಳಲ್ಲಿ ಬೆಳಗಲಿ ದೀಪ ನಿತ್ಯ…
ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

***

— ರಾಘವೇಂದ್ರ ಹೆಗಡೆ.

ಚಿತ್ರತೀರ : ಪುಷ್ಪವೃಷ್ಠಿ..


ಹನಿಯೊಡೆದ ಹೊನ್ನಪರಾಗ..

ಕೆಂಪುತೋಟದಲ್ಲಿ ಕಂಡ ಕೆಂಬಾಳೆ ಹೂವು

ದುಂಬಿಯ ದುನಿಯ-ಜಿನಿಯ..

ಅಪರೂಪದ ಬಿಳಿದಾಸವಾಳ

ಲಾಲ್ ಬಾಗ್ ಸಸ್ಯತೋಟದಲ್ಲಿ ಸೆರೆಸಿಕ್ಕ ಹೂವು..

******
ತಮ್ಮೆಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..

— ರಾಘವೇಂದ್ರ ಹೆಗಡೆ