Category Archives: ಲೇಖನ

Articles by Raghavendra Hegde

ವರುಷ ಆರು ಹರುಷ ನೂರು..!


‘ರಾ ಗ ನೌ ಕೆ’ ಗೆ ಇವತ್ತಿಗೆ ಆರು ತುಂಬಿತು. ಈ ಪಯಣದಲ್ಲಿ ಸಿಕ್ಕಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇಲ್ಲಿ ಏನೂ ಬರೆಯದೇ ಅದೆಷ್ಟು ಬೇಗ ವರ್ಷವೊಂದು ಉರುಳಿಹೋಯ್ತಲ್ಲ ಎಂಬ ಖೇದವಿದೆ. ಇಲ್ಲಿ ಬಂದು ಹೋಗದಷ್ಟು ಬ್ಯುಸಿ ಆಗಿಬಿಟ್ಟೆನಾ ಅಥವಾ ಸೃಜನಶೀಲತೆಯ ವ್ಯವಧಾನ ಬತ್ತಿ ಹೋಗಿದೆಯಾ ಎಂಬೆಲ್ಲ ಯೋಚನೆಗಳು ಆಗಾಗ ಬಂದು ಕಾಡುವುದಿದೆ.

to blog
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಎಂಬುದೊಂದೇ ಈ ಹೊತ್ತಿನ ಅರಿಕೆ.

–ರಾಘವೇಂದ್ರ ಹೆಗಡೆ


ಇವುಗಳನ್ನೂ ನೋಡಿ:

ಮೋಡದ ಮೇಲೊಂದು ವರ್ಷದ ನಡಿಗೆ..

ಒಂದು, ಎರಡು..

ಮೂರು..

ಭ್ರಮೆ ಮತ್ತು ಕವಿತೆ

ವರ್ಷ ಐದಾಯ್ತು!


ಕರ್ಮ: ಒಂದು ಅವಲೋಕನ


karma by karnam pavan prasad
ವಿದ್ಯೆ ಕಲಿಯುವುದು ಅತ್ಯವಶ್ಯ. ಜವಾಬ್ದಾರಿಯುತ ಸತ್ಪ್ರಜೆಯಾಗುವುದೂ ಅಷ್ಟೇ ಮುಖ್ಯ. ಆದರೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಹಾನಗರ ಸೇರಿ ತೀರ ವೈಭೋಗದ ಜೀವನ ನಡೆಸಬೇಕೆಂಬ ಭರದಲ್ಲಿ ತಾವೆತ್ತ ಸಾಗುತ್ತಿದ್ದೇವೆ ಎಂಬುದರ ಪರಿವೆ ಇಂದು ಅದೆಷ್ಟೋ ಯುವಜನರಲ್ಲಿ ಇಲ್ಲವಾಗಿದೆ. ವೀಕೆಂಡ್ ಮಸ್ತಿಯ ಹೆಸರಲ್ಲಿ ಸಹವಾಸದೋಷದಿಂದ ಅದೆಂಥೆಂತದೋ ದುಶ್ಚಟಗಳಿಗೆ ದಾಸರಾಗಿ ಅತ್ತ ಗುರುವೂ ಇಲ್ಲದೇ ಇತ್ತ ಗುರಿಯೂ ಇಲ್ಲದೇ ತ್ರಿಶಂಕು ಸ್ವರ್ಗದಲ್ಲಿ ತೇಲುವ ಅನೇಕ ಜನ ನಮಗೆ ಕಾಣಸಿಗುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ಲಿವಿಂಗ್ ಟುಗೆದರ್ ಪದ್ದತಿ ಇಂದು ಈ ಮಣ್ಣಿನ ಸ್ವಾಸ್ಥ್ಯವ ನ್ನೂ ಕೆಡಿಸುತ್ತಿದೆ. ಇಂತಹ ಅಂಶಗಳನ್ನೊಳಗೊಂಡ ’ಕರ್ಮ’, ಯುವ ಬರಹಗಾರ – ನಾಟಕಕಾರ ಕರಣಂ ಪವನ್ ಪ್ರಸಾದ್ ರ ಚೊಚ್ಚಲ ಕಾದಂಬರಿ.

ತನ್ನ ತಂದೆಯ ಸಾವಿನ ವಿಷಯವನ್ನು ತಿಳಿದ ಸುರೇಂದ್ರ ಬಹುವರ್ಷಗಳ ನಂತರ ಈಗ ತನ್ನ ಹುಟ್ಟೂರಿಗೆ ಬರುತ್ತಾನೆ. ಪುರೋಹಿತರೂ, ವಿದ್ವಾಂಸರೂ ಆಗಿದ್ದ ತಂದೆಯವರ ಅಪರ ಕರ್ಮವನ್ನು ಜ್ಯೇಷ್ಠ ಪುತ್ರನಾದ ಅವನೇ ಮಾಡಬೇಕೆಂದು ನಿರ್ಣಯವಾಗುತ್ತದೆ. ಮುಂದಿನ ಹದಿನೈದು ದಿನ ನಡೆವ ಘಟನೆಗಳೇ ಕಥೆಯ ಹಂದರ. ಬ್ರಾಹ್ಮಣ ಸಮುದಾಯದಲ್ಲಿ ನಡೆವ ಅಪರ ಕ್ರಿಯಾಚರಣೆಯ ವಿಧಾನವನ್ನು ಕಥೆಯ ಸನ್ನಿವೇಶಗಳೊಂದಿಗೆ ಕಟ್ಟಿಕೊಟ್ಟ ಪರಿ ಅದ್ಭುತ. ಕಥೆಗನುಗುಣವಾಗಿ ಅಲ್ಲಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ತಾತ್ಪರ್ಯಗಳನ್ನು ಬಳಸಲಾಗಿದೆ. ಆ ಹದಿನೈದು ದಿನಗಳಲ್ಲಿ ಕಥಾನಾಯಕ ಸುರೇಂದ್ರನ ಮನದಲ್ಲಿ ಉಂಟಾಗುವ ಗೊಂದಲ, ದುಃಖ, ಹೊಯ್ದಾಟ, ಆಸಹಾಯಕತೆ, ಭಯ, ಅಪರಾಧಿ ಭಾವ, ಜಿಜ್ಞಾಸೆ ಮುಂತಾದವೆಲ್ಲ ಕಥೆಯ ವಿವಿಧ ಕೋನಗಳಲ್ಲಿ ಹಾದು ಹೋಗುತ್ತವೆ. ಸಂದರ್ಭೋಚಿತವಾಗಿ ಉಲ್ಲೇಖಿಸಿದ ಗರುಡಪುರಾಣದ ಅರ್ಥ ವಿವರಣೆ ಓದಲು ಮತ್ತಷ್ಟು ಖುಷಿ ಕೊಡುತ್ತದೆ.

ನಾಳೆ ತನ್ನ ಕ್ರಿಯಾಚರಣೆ ಮಾಡುವವರು ಯಾರೂ ಇಲ್ಲ ಎಂಬ ಭಾವನೆ ಸುರೇಂದ್ರನಲ್ಲಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತದೆ ಅಲ್ಲದೇ ತನ್ನ ಮತ್ತು ಪತ್ನಿಯ ಸಂಬಂಧದಲ್ಲಿಲ್ಲದ ನೈತಿಕ ಗಟ್ಟಿತನದ ಬಗ್ಗೆ ಅವಲೋಕಿಸಿ ಭಯ ಮತ್ತು ಹೇಸಿಗೆಯಾಗುತ್ತದೆ. ಅಪರ ಕರ್ಮಗಳೆಲ್ಲ ಮುಗಿದ ಮೇಲೆ ಸುರೇಂದ್ರನಿಗೆ ತಾನು ಕ್ರಿಯಾಚರಣೆ ಮಾಡಿದ್ದು ತನಗೆ ಜನ್ಮವಿತ್ತ ತಂದೆಯದ್ದಲ್ಲ ಎಂಬ ಕಠೋರ ಸತ್ಯದ ಅರಿವಾಗುತ್ತದೆ. ಅಷ್ಟರಲ್ಲಿ ಅವನ ತಮ್ಮ ನರಹರಿ ಅಮ್ಮ ತೀರಿಹೋಗಿಬಿಟ್ಟ ವಿಷಯವನ್ನು ತಿಳಿಸುತ್ತಾನೆ. ಮಹಾನಗರ ಬಿಟ್ಟು ಅಜ್ಞಾತವಾಸಕ್ಕೆ ಬಂದಂತಾಗಿದ್ದವನಿಗೆ ಈಗ ಎಲ್ಲ ಮುಗಿದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಕಸ್ಮಾತಾಗಿ ಮತ್ತೊಂದು ಕರ್ಮ ಬಂಧನ ಕಟ್ಟಿಹಾಕುತ್ತದೆಯೇ ಎಂಬುದನ್ನು ಓದುಗರ ವಿವೇಚನೆಗೆ ಬಿಡಲಾಗಿದೆ.

ಕಥೆಯ ಸಲುವಾಗಿನ ಲೇಖಕರ ಅಧ್ಯಯನವನ್ನು ಮೆಚ್ಚಲೇಬೇಕು. ಅವರು ಹಲವುಕಡೆ ಪಾತ್ರದ ಒಳಹೊಕ್ಕು ಬರುವಲ್ಲಿ ಯಶಸ್ವಿಯಾಗುತ್ತಾರೆ. ಕುತೂಹಲವನ್ನು ಉಳಿಸಿಕೊಂಡು, ಕೊನೆಯವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಕಥೆ ಯಶಸ್ವಿಯಾಗುತ್ತದೆ. ಪ್ರಸಿದ್ದ ಬರಹಗಾರ ಓದುಗರ ಮೇಲೆ ತನ್ನ ಬರವಣಿಗೆಯ ಮೂಲಕ ಪ್ರಭಾವ ಬೀರುವುದು ಸಹಜ. ಹೊಸಬರಲ್ಲಿ ಸೃಜನಶೀಲ ಬರವಣಿಗೆಯ ಸ್ಪುರಣೆಗೆ ಅವು ಅವಶ್ಯ ಕೂಡ. ಅದರಂತೆ ಇಲ್ಲಿ ಭೈರಪ್ಪನವರ ಪ್ರಭಾವ ಲೇಖಕರ ಮೇಲೆ ಆದಂತೆ ಒಮ್ಮೊಮ್ಮೆ ಅನಿಸುತ್ತದೆ. ಯುವ ಬರಹಗಾರರೆಂದರೆ ಮೂಗು ಮುರಿಯುವ ಇಂತಹ ದಿನಗಳಲ್ಲಿ ’ಕರ್ಮ’ ಕನ್ನಡ ಸಾರಸ್ವತ ಲೋಕದಲ್ಲಿ ಹೊಸಬರ ಬಗ್ಗೆ ಭರವಸೆ ಮೂಡಿಸುತ್ತದೆ.

ಪುಸ್ತಕ: ಕರ್ಮ (ಕಾದಂಬರಿ)
ಲೇಖಕರು: ಕರಣಂ ಪವನ್ ಪ್ರಸಾದ್
ಪ್ರಕಾಶನ: Concave Media
ಬೆಲೆ: 125 (ಮೊದಲ ಮುದ್ರಣಕ್ಕೆ ಅನ್ವಯಿಸುವಂತೆ)


— ರಾಘವೇಂದ್ರ ಹೆಗಡೆ

ರಥಬೀದಿ…


ಹಾದಿಯ ಅಂಚು ಸವರುವ ಅಂಗಡಿ ಬಾಗಿಲು, ಅಲ್ಲೇ ಮೆಟ್ಟಿಲು, ಬಾಣಲೆಯಂಥ ದೊಡ್ಡ ಹರಿವಾಣಗಳಲ್ಲೊಂದಿಷ್ಟು ಅರಿಶಿನ, ಕುಂಕುಮ, ಕುಪ್ಪಿಬಣ್ಣ , ಊದುಬತ್ತಿ, ಕರ್ಪೂರ, ಶ್ರೀಗಂಧ, ಚಂದನ ಕೊರಡು, ಬಾಗಿಲ ಬದಿಗೆ ನೇತುಬಿದ್ದ ಬಾಳೆಗೊನೆ, ದೇಗುಲದ ಘಂಟಾನಾದ…. ಇಡೀ ಬೀದಿಗೇ ಒಂದು ಕಂಪು. ತೋರಣದ ಮಾವಿನಫಲ, ಅರಿಶಿನ ಎಲೆ, ತೆಂಗಿನಕಾಯಿ, ಮಲ್ಲಿಗೆ, ಸೇವಂತಿಗೆಯ ಘಮ, ಮಿಟಾಯಿ ಅಂಗಡಿ, ಸೇಬು, ಚಿಕ್ಕು, ದ್ರಾಕ್ಷಿ, ದಾಳಿಂಬೆ, ಸವತೆ, ಹಾಗಲ, ಬೇವು… ಅರೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಇದೇ ಸಂತೆ. ಈ ದಾರಿಯಲ್ಲಿ ಇಂಥವುಗಳ ಸೊಬಗು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟಕ್ಕೂ ನಮ್ಮೂರ ರಥಬೀದಿಯೇನು ತೀರ ಉದ್ದದ್ದೂ, ಅಗಲದ್ದೂ ಅಲ್ಲ. ಒಂದು ತುದಿ ಮಾತ್ರ ಸ್ವಲ್ಪ ವಿಶಾಲ; ಆದರೆ ಮತ್ತೊಂದು ತುದಿ ತೀರ ಕಿರಿದು. ಎಲ್ಲ ಊರಿನ ರಥಬೀದಿಗಳೂ ಬಹುಶ:ಹೀಗೇ ಇರಬಹುದೇನೋ.

ಬಾಲ್ಯದಲ್ಲಿ ಆಟಿಕೆಯೊಂದ ನೋಡಿ ಅಪ್ಪನ ಬಳಿ ಹಟ ಮಾಡಿದ್ದು, ತರಕಾರಿ ಕೈಚೀಲವ ಕೆಡವಿದ್ದು, ತೇರಿಗೆ ಬಾಳೆಹಣ್ಣು ಎಸೆದದ್ದು ಇಂಥ ನೆನಪುಗಳು ಇಲ್ಲಿ ಹಾಯುವಾಗೆಲ್ಲ ಗರಿ ಬಿಚ್ಚುತ್ತವೆ. ಗಮ್ಯ ಕಾಣುವಷ್ಟೇ ಇದ್ದರೂ ತನ್ನೊಡಲಾಳದ ಅಕ್ಷಯ ರಮ್ಯತೆ, ಅದೆಂಥದೋ ಆಪ್ಯಾಯತೆಯಿಂದ ನನ್ನ ಇದು ಸದಾ ಕಾಡುತ್ತಿರುತ್ತದೆ. ಹಾದಿ ಕಿರಿದಾದಷ್ಟೂ ನನಗೆ ಸರಕ್ಕನೆ ಅಪ್ಪನ ನೆನಪಾಗಿಬಿಡುತ್ತದೆ. ತಮ್ಮಾ ಈ ಜೀವನವೇ ಒಂದು ರಥಬೀದಿ ನೋಡು ಎಂದು ಆತ ಒಮ್ಮೆ ನಸುನಕ್ಕಿ ಹೇಳಿದ್ದನ್ನು ಇಂದು ಈ ಬೀದಿಯ ಕಣಕಣವೂ ಪ್ರತಿಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ಅಪ್ಪ ನನ್ನಿಂದ ಕಡೆಯದಾಗಿ ಕೇಳಿದ್ದ ಕವಿಕೆಯೊಂದು ಈಗೇಕೋ ಮತ್ತೆ ನೆನಪಾಗುತ್ತಿದೆ.

ಭರವಸೆಯ ಬೆಳಕೆ, ಜ್ಞಾನಸಿರಿ ಬೆಳಕೆ
ಜಗತುಂಬಿ ಅರಳು ಬಾ ಬೆಳಕೆ
ಮುನ್ನಡೆಸೆನ್ನ ಸನ್ಮಾರ್ಗ ಪಥಕೆ…

ಚಿತ್ರವೊಂದನ್ನು ತೆಗೆಯಬೇಕು ಎಂದುಕೊಂಡು ಬಂದಿದ್ದೆ. ಆದರೆ ಈ ರಥಬೀದಿಯ ಸೊಬಗ ಕೇವಲ ಒಂದು ಚೌಕಟ್ಟಲ್ಲಿ ಬಂಧಿಸುವುದು ಅಷ್ಟು ತರವಲ್ಲ ಎಂದೆನಿಸಿ, ಕ್ಯಾಮರಾವನ್ನು ಪುನ: ನನ್ನ ಸಿ.ಡಿ.ಹಂಡ್ರೆಡ್ ನ ಪೆಟ್ಟಿಗೆಯಲ್ಲಿ ತುರುಕಿ ಈಗ ಇಲ್ಲೇ ಕೈಚೀಲ ಹಿಡಿದು ಅಲೆಯುತ್ತಿದ್ದೇನೆ. ಒಂದಷ್ಟು ಹೂವು, ಹಣ್ಣು, ಕಡ್ಡಿ-ಕರ್ಪೂರ ಜೊತೆಗೆ ಮತ್ತೊಂದಷ್ಟು ನೆನಪುಗಳನ್ನು ತುಂಬಿ ಒಯ್ಯಬೇಕು.

***

ಈ ಕವಿತೆಯನ್ನೂ ಓದಿ 🙂

ಮನೆ-ಮನಗಳಲ್ಲಿ ಬೆಳಗಲಿ ದೀಪ ನಿತ್ಯ…
ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

***

— ರಾಘವೇಂದ್ರ ಹೆಗಡೆ.

‘ಅನಾವರಣ’ವಾದ ಕವಿತೆ


ಹಳ್ಳಿಯಲ್ಲಿ ಜಮೀನು ನೋಡಿಕೊಂಡಿರುವ ವೃದ್ದ ದಂಪತಿ, ಉದ್ಯೋಗ ನಿಮಿತ್ತ ನಗರಸೇರಿ ಬೇರೂರಿದ ಅವರ ನಾಲ್ವರು ಮಕ್ಕಳು ಮತ್ತವರ ಕುಟುಂಬ,ಅದರಲ್ಲೊಂದಷ್ಟು ಜನ ಮಾನವೀಯ ಸಂಬಂಧಗಳ ಮೌಲ್ಯ ಅರಿತವರಾದರೆ ಮತ್ತಷ್ಟು ಜನ ಭಾವನೆಗಳನ್ನೆಲ್ಲ ಮಾರಿ ಹಣಗೋಚುವ ಚಾಳಿಯವರು.., ಇಂತಹ ಪಾತ್ರಗಳು ಇಲ್ಲಿನ ಕಥಾಸೂತ್ರಗಳು. ಅಂದಹಾಗೆ ಈಗ ಹೇಳಹೊರಟಿರುವುದು ಈ ಟಿವಿ ಕನ್ನಡದಲ್ಲಿ ಪ್ರಸಾರಗೊಂಡ ‘ಅನಾವರಣ’ದ ಕುರಿತು.

ಅಪ್ಪ ಮಕ್ಕಳ ಸಂಬಂಧ, ಪ್ರಚಲಿತ ಸ್ಥಿತಿಗತಿ, ವ್ಯವಸಾಯಕ್ಕೆ ಕೂಲಿಗಳ ಅಭಾವ, ಲಂಚಗುಳಿತನ, ಹಣ ಎಂಬ ಹುಚ್ಚು, ವ್ಯವಹಾರವೇ ಮುಖ್ಯವಾಗಿ ಹೆತ್ತವರನ್ನು ಮತ್ತು ತಾವು ಹೆತ್ತ ಮಕ್ಕಳನ್ನು ಉಪೇಕ್ಷಿಸುವ ಜನ, ಬೇಜವಾಬ್ದಾರಿ ಪರಮಸ್ವಾರ್ಥಿ ಅಪ್ಪ ಮತ್ತು ಗಂಡನ ಮಧ್ಯೆ ಹೈರಾಣಾಗುವ ಹುಡುಗಿ, ಮಣ್ಣಿನ ಮೋಹಕ್ಕೆ ಮನಸೋತು ವಿದೇಶದಿಂದ ಹಳ್ಳಿಗೆ ಬರುವ ದಂಪತಿ.. ಇಂತಹ ಪಾತ್ರಗಳ ಮೂಲಕ ಇಲ್ಲಿ ಪ್ರಪಂಚ ತೆರೆದುಕೊಳ್ಳುತ್ತದೆ.

ಹಾಗೆ ನೋಡಿದರೆ ಇಲ್ಲಿ ಕಥಾವಸ್ತುವೇ ಕಥೆ ಮತ್ತು ಕಥಾನಾಯಕ.

ಅಪ್ಪ ಅಮ್ಮನ ಮಾತನ್ನು ಅಲಕ್ಷಿಸಿ, ಮದುವೆಯಾಗುತ್ತೇನೆಂದು ನಂಬಿಸಿದವನ ಹಿಂದೆ ಹೊರಟು ಮಗುವನ್ನೂ ಪಡೆದು ಕಡೆಗೆ ಆತನಿಂದಲೇ ಉಪೇಕ್ಷೆಗೊಳಗಾಗಿ ಇತ್ತ ತವರಿನಿಂದಲೂ ಧಿಕ್ಕರಿಸಲ್ಪಡುವ ಮಹಿಳೆ(ಶೃತಿ) ಹಾಗೂ ತನ್ನತನ, ಸ್ವಾಭಿಮಾನ ಇಂತಹ ಪದಗಳ ಪರಿಚಯವೇ ಇರದ ತೀರ ಬೇಜವಾಬ್ದಾರಿ, ವ್ಯಸನಿ ಮತ್ತು ಅಹಂಕಾರಿ ಪುರುಷನೊಬ್ಬನ ಪತ್ನಿ (ಮಾನಸ) ಪಾತ್ರಗಳು ಕಥಾಹಂದರದಲ್ಲಿ ಪುರುಷ ಪ್ರಧಾನ ವ್ಯವಸ್ತೆಯ ಸಮಾಜ ಉಂಟುಮಾಡಬಹುದಾದ ರೇಜಿಗೆ ಬಗೆಗೆ ಹೆಣ್ಣಿನ ವೇದನೆ ಸಂವೇದನೆಗಳ ಮೌನ ಮಾತಾಗುತ್ತವೆ.

ಎಷ್ಟೋವರ್ಷಗಳ ನಂತರ ವಿದೇಶದಿಂದ ಹುಟ್ಟೂರಿಗೆ ಬರುವ ದಂಪತಿ, ಸಂಬಂಧದ ನೆಪಹೇಳಿ ಬಂದವರಿಗೆಲ್ಲ ಕೊಡುಗೈ ದಾನಿಗಳಾಗಿ ಕಡೆಗೆ ಮೋಸಹೋಗಿ ಎಲ್ಲ ಕಳೆದುಕೊಂಡು ಮತ್ತೆ ಹಿಂದೆ ತಾವಿದ್ದಲ್ಲಿಗೇ ವಾಪಸಾಗುತ್ತಾರೆ. ಒದ್ದೆ ಭೂಮಿಯನ್ನು ಅಗೆವವರು ಜಾಸ್ತಿ. ಅಲ್ಲಿಗೆ ಹಣವಿದ್ದಾಗ ಎಲ್ಲ ಬಂಧುಗಳು ಇಲ್ಲದಿದ್ದಾಗ ಯಾರೂ ಇಲ್ಲ ಎಂಬ ಕಟುವಾಸ್ತವ ಪ್ರಪಂಚದ ಅನಾವರಣಪ್ರಯತ್ನವೂ ನಡೆಯುತ್ತದೆ.

ತಂದೆಯ ಬ್ರಷ್ಟಾಚಾರ, ಲಂಚಗುಳಿತನವನ್ನು ಧಿಕ್ಕರಿಸಿ ಮಗಳು ಮನೆಬಿಟ್ಟು ಹಳ್ಳಿಯ ತಾತನ ಮನೆ ಸೇರುತ್ತಾಳೆ. ಇತ್ತ ಇನ್ನೊಬ್ಬಳು ಸದಾ ವ್ಯವಹಾರಲೋಕದಲ್ಲೇ ಮುಳುಗಿರುವ ತನ್ನ ತಾಯಿಯನ್ನು ಧಿಕ್ಕರಿಸಿ ತಾತನ ಮನೆಗೆ ನಡೆಯುತ್ತಾಳೆ.

ಹಣಬಾಕ ಮಗನ ನಡವಳಿಕೆ ಬಗ್ಗೆ ತೀವ್ರ ಮನನೊಂದ ವೃದ್ದ ತಾಯಿ ಮಗಳ ಬಳಿ ಉಸುರುತ್ತಾಳೆ – “ಹೊಟ್ಟೆಯಲ್ಲಿದ್ದಾಗ್ಲೇ ತೀವ್ರ ಸಂಕಟ ಕೊಡ್ತಿದ್ದ, ಈಗ್ಲೂ ಬಿಟ್ಟಿಲ್ಲ ನೋಡು..”
ಮತ್ತೊಮ್ಮೆ ತಾತ್ಸಾರಗೊಂಡು ತನ್ನ ಗಂಡನ ಕುರಿತು ಹೇಳುತ್ತಾಳೆ –“ ಹಣ್ಣು ಬೆಳೀತಾ ಇತ್ತು, ಹಣದ ಮೋಹ ಹೊಗೆಸೊಪ್ಪು ನೆಟ್ಟ ಈ ವ್ಯಕ್ತಿ”.

ಅಲ್ಲಲ್ಲಿ ಸಂಭಾಷಣೆ ತೀವ್ರ ತೀಕ್ಷ್ಣ. ಅನಗತ್ಯ ಮಾತಿಲ್ಲ. ಹೆಚ್ಚಿನ ಭಾವಗಳಿಗೆ ಮೌನವೇ ಧ್ವನಿ. ಹಾಗಾಗಿ ಮೌನ ಇಲ್ಲಿ ಸಂಭಾಷಣೆಯ ಒಂದು ಭಾಗವೆ. ಹಿಂದೆ ‘ಮಂಥನ’ದ ಮೂಲಕ ಸಂಭಾಷಣೆಗಳು ಹೀಗೂ ಇರಬಹುದು ಎಂದು ತೋರಿಸಿದ್ದ ಎಂ. ಎನ್. ಸೇತುರಾಮ್ ಅದೇ ಪರಂಪರೆಯನ್ನು ಇಲ್ಲೂ ಮುಂದುವರಿಸಿದ್ದಾರೆ. ಆಡುಮಾತಿಗಿಂತ ಕೊಂಚ ಭಿನ್ನ ನಿರೂಪಣಾಶೈಲಿಯಿಂದ ಧಾರಾವಾಹಿ ಸಾಹಿತ್ಯಿಕವಾಗಿ ಗುಣಾತ್ಮಕವಾಗುತ್ತದೆ.

ಹಳ್ಳಿಯ ಜೀವನ ಸಾಕೆಂದು ವೃದ್ದ ಪತಿಯನ್ನು ಬಿಟ್ಟು ನಗರದಲ್ಲಿರುವ ಹಿರಿಯ ಮಗನ ಮನೆ ಸೇರಿಕೊಳ್ಳುವ ಮಹಿಳೆ ಮತ್ತು ತಾ ಬೆಳೆಸಿದ ತೋಟ ಬಿಡುವ ಮನಸ್ಸಾಗದೆ ಹಳ್ಳಿಯಲ್ಲೇ ಉಳಿವ ಆಕೆಯ ಪತಿ ಅಲ್ಲಲ್ಲಿ ಕಥೆಯ ನೊಗ ಹಿಡಿದವರಂತೆ ಕಾಣುತ್ತಾರೆ.

ತನ್ನ ಮಗನ ಬೇಜವಾಬ್ದಾರಿತನ ಮತ್ತು ಉಢಾಪೆಯಿಂದ ಸೊಸೆ ಮಾನಸಳ ಜೀವನ ಹಾಳಾದುದಕ್ಕೆ ಮರುಗಿ, ನೈತಿಕ ಹೊಣೆ ಹೊತ್ತು “ಮಗಳೇ ನಿನಗೆ ಯಾವಾಗ ಕಷ್ಟವಾದರೂ ಕರೆ, ನಾ ನಿನ್ನ ಜೊತೆಗಿದ್ದೇನೆ” ಎಂದು ಆಕೆಗೆ ಹಿಂದೆ ನೀಡಿದ್ದ ಆಶ್ವಾಸನೆಯಂತೆ ಕಡೆಗೆ ವೃದ್ದ ಮಾವ ನಗರದಲ್ಲಿರುವ ಸೊಸೆಯ ಮನೆಗೆ ಬರುತ್ತಾನೆ. ಮಾವನ ಬಗೆಗೆ ಮರುಕಪಟ್ಟು ಮಾನಸ ಹೇಳುತ್ತಾಳೆ – “ನನ್ನಿಂದ ನೀವು ಹಳ್ಳಿ ಬಿಡುವಂತಾಯಿತು”.
“ಮಗಳೇ ಅದು ನಿರರ್ಥಕ, ಇದು ಸಾರ್ಥಕ”.
“ನಗರದ ಬದುಕಿಗೆ ನಿಮಗೆ ಹೊಂದಿಕೆ ಕಷ್ಟವಾಗಬಹುದು”
“ಮನುಷ್ಯ ಯಾವಾಗ ಹೊಂದಿಕೊಂಡು ಬದುಕಿದ್ದ ಹೇಳು, ಧಿಕ್ಕರಿಸಿಯೇ ಬದುಕಿದ್ದು. ಹೊಂದಾಣಿಕೆ ಬರೀ ನಟನೆ” ಎಂಬ ಆತನ ತೂಕದ ಮಾತು ನೈಜ ಪ್ರಪಂಚವನ್ನು ಅನಾವರಣಗೊಳ್ಳುತ್ತದೆ.

ಅತ್ತ ವೃದ್ದ ತಾಯಿ ಗಂಡುಮಕ್ಕಳ ವರ್ತನೆಯಂದ ಜಿಗುಪ್ಸೆಗೊಂಡು “ಸಹಿಸುವುದು ಮಾತ್ರವಲ್ಲ ತಿದ್ದುವುದೂ ತಾಯಿ” ಎಂದು ತಾನೆ ಹಿಂದೆ ಧಿಕ್ಕರಿಸಿದ್ದ ಮಗಳ(ಶೃತಿ) ಮನೆ ಸೇರುತ್ತಾಳೆ.
ತನಗೆ ಮತ್ತೊಂದು ಕೆಲಸ ಸಿಕ್ಕಿತು ಎಂದು ಸಂತಸದಿಂದ ಮಾವನ ಬಳಿ ಹೇಳುವ ಮಾನಸ, ಜೀವನದಲ್ಲಿ ಸಾಕಷ್ಟು ವೇದನೆಗಳನ್ನು ಅನುಭವಿಸಿದ್ದಕ್ಕೆ ಪ್ರತಿಕ್ರಿಯೆಯೆಂಬಂತೆ ಪ್ರಪಂಚವನ್ನು ಕುರಿತು – “ನೀವೆಲ್ಲ ಎಷ್ಟೇ ಅಡೆ ತಡೆ ಒಡ್ಡಿದರೂ ನಾನು ಬದುಕಿ ತೋರಿಸ್ತೇನೆ” ಎಂದು ಉಸುರುತ್ತ ವಿಶ್ವಾಸದ ಅಲೆಯಾಗುತ್ತಾಳೆ. ಅವಳ ಉದ್ಗಾರ ಕತ್ತಲಲ್ಲಿ ಪ್ರತಿಧ್ವನಿಯಾಗುತ್ತದೆ.
ಅದಕ್ಕೆ ಮಾವ “ನೀನ್ ಹೇಳಿದ್ದು ಯಾರಿಗೂ ಕೇಳ್ಸೆ ಇಲ್ಲ” ಎಂದು ವ್ಯಂಗ್ಯ ನಗೆ ಬೀರುತ್ತಾನೆ.

ಹಿಂದೆಲ್ಲ ಮತ್ತೊಂದು ಮದುವೆಯಾಗು ಹೀಗೆ ಒಂಟಿ ಕೊರಗಬೇಡ ಎಂಬ ಮಾವನ ಸಲಹೆಯನ್ನು ಕಡೆಗಣಿಸಿದ್ದ ಆಕೆ ಈಗ – “ಮಾವ ನನಗೂ ಬದುಕು ಅಂತ ಒಂದು ಇದೆ ಅಲ್ವಾ ?” ಎಂದು ಪ್ರಶ್ನಾರ್ಥಕವಾಗುತ್ತಾಳೆ. ಆತ ನಿರುತ್ತರನಾಗಿ ಕಣ್ಣೆದುರಿಗಿನ ಅನಂತವನ್ನು ನೋಡುತ್ತ ಹೊರಟು ಹೋಗುತ್ತಾನೆ. ಹೀಗೆ ಕಥೆಯ ಕೊನೆಯ ಸಂಭಾಷಣೆಯನ್ನು ಮತ್ತೆ ಮೌನವೇ ಧ್ವನಿಸುತ್ತದೆ.

ಪ್ರಪಂಚದಲ್ಲಿ ಯಾವುದೂ ನಿಖರವಲ್ಲ, ಎಲ್ಲ ಸಾಧ್ಯತೆ ಸಂಭವನೀಯತೆಗಳೆ. ಇದಕ್ಕೆ ಇದೇ ಕೊನೆ ಎಂದು ಎಲ್ಲಿಯೂ ನಾವುನಾವೆ ಚೌಕಟ್ಟು ಹಾಕಿಕೊಳ್ಳುವುದು ಅಸಮಂಜಸ. ಬದುಕು ಒಂದು ಹರವು. ಅದರ ಮೂಲ ಮತ್ತು ಕೊನೆಯನ್ನು ಶೋಧಿಸುವುದು ಕಷ್ಟ ಅಥವ ಗ್ರಹಿಸುವುದು ಅಸಂಗತ.

‘ಕಬ್ಬಿನ ಸಿಹಿರಸ ಕಮರಿ ಕಾಕಂಬಿ ಜೊಳ್ಳುತೆನೆ ನಿರ್ಬೀಜ ಹಣ್ಣು’ ಎಂಬ ಶೀರ್ಶಿಕೆ ಗೀತೆಯ ಸಾಲು ಕೂಡ(ಸಾಹಿತ್ಯ: ಬಿ. ಅರ್. ಲಕ್ಷ್ಮಣರಾವ್) ಕಥೆಯ ಅನಾವರಣದ ಒಂದು ಭಾಗವೆ. ಸಂಭಾಷಣೆಯಲ್ಲಿ ಒಗಟಿದೆ. ಹಲವುಬಾರಿ ಒಂದೇ ಪದ ಅಥವಾ ನುಡಿಗಟ್ಟಿನ ಬಳಕೆಯಾದದ್ದೂ ಇದೆ. ಆದರೂ ಮಾತು, ಸನ್ನಿವೇಶಗಳನ್ನು ಮೈಲುಗಟ್ಟಲೆ ಬೆಳೆಸದೆ ಸಾಧ್ಯವಾದಷ್ಟೂ ಚೊಕ್ಕವಾಗಿ ಪ್ರಸ್ತುತಪಡಿಸುತ್ತ ವ್ಯರ್ಥ ಕಾಲಕ್ಷೇಪ ಮಾಡದೆ ಸಾಗಿ ೧೩೯ನೇ ಕಂತಿನಲ್ಲಿ ವಿರಮಿಸುವ ಈ ದೃಶ್ಯಕಾವ್ಯ ಹತ್ತರ ಜೊತೆಗಿನ ಹನ್ನೊಂದಾಗದೆ ಕೊಂಚ ಭಿನ್ನವಾಗಿ ನಿಲ್ಲುತ್ತದೆ.

******

— ರಾಘವೇಂದ್ರ ಹೆಗಡೆ.

ಮಳೆ ಎಂಬ ಹನಿವ ಕವಿತೆ..


ನೀಲತೀರದ ಒಡಲ ಹಸಿರಿನಲಿ
ಹೆಸರು ಮರೆತ ಮೋಡ
ಮೊಳಕೆಯೊಡೆದು ಬರುತ ಮಳೆಹನಿ
ಚಟಪಟನೆ ನುಡಿಸುವುದು ಕಾಡನೋಡ..

ಮಳೆಯ ಮಹಿಮೆಯೇ ಹಾಗೆ.. ಮಣ್ಣ ಹುಡಿಯಿಂದ ಕಂಪ ಕುಡಿಸುತ್ತದೆ. ಬಡಕಲು ಬಳ್ಳಿಗೆ ಜೀವಕಳೆಯ ಹಬ್ಬಿಸುತ್ತದೆ. ಮಳೆ ಮೋಡದ ಮೊಗ್ಗು, ಹೂವು.. ಇಂಥ ಹೂವಿನ ಮಧುರ ಸ್ಪರ್ಷಕೆ ಮುದದಿ ಅವತರಿಸುವ ಅದೆಷ್ಟೋ ಹೂಗಳಿವೆ; ಅಕ್ಷರಶಃ ಮಳೆ ಹೂಗಳಿವೆ. ಹನಿಗೆ ಅರಳುವ ಮೊಗ್ಗುಪ್ರಾಣ ಧರೆಯ ಕಣಕಣಕೆ ಜೀವಗಂಧ ಸ್ಪುರಿಸುತ್ತದೆ.
ಒಂದೊಂದಾಗಿ ಬಿಡಿಸಿದರೆ ಮೂಗುತಿಯಂತೆ, ಕಿವಿ ಕುಡುಕಿನಂತೆ ಕಾಣುವ ಬಂದುಳಿಕೆಯ ಹೂಮಾಲೆಯ ಚಿತ್ರ ಇಲ್ಲಿದೆ. ಇದನ್ನು ’ಸೀತಾಳೆ ದಂಡೆ’ ಅಥವಾ ’ಸೀತಾದಂಡೆ’ ಎಂದೂ ಕರೆಯುತ್ತಾರೆ.

ಮಳೆಗಾಲದ ಆರಂಭದಲ್ಲಿ ಮಾತ್ರ ಕಂಡುಬರುವ ಸೀತಾದಂಡೆ

******

ಮಲೆನಾಡು – ಕರಾವಳಿ ಈ ಎರಡೂ ಪ್ರದೇಶಗಳಲ್ಲಿ ಬೆರೆತು ಬೆಳೆದು ಬಂದ ನನ್ನಂಥ ಅನೇಕರಿಗೆ ಮಳೆಗಾಲದ ಜಲಪಾತಗಳ ಪರಿಚಯ ಇಲ್ಲದಿಲ್ಲ. ಬೆಟ್ಟಗುಡ್ಡಗಳಲ್ಲಿ ಬೇಸಿಗೆಯಲ್ಲಿ ಕಾಲುದಾರಿಯಂತೆ ಕಡಿದಾದ ಕಲ್ಲು-ಸವಕಲು ಮಾರ್ಗ ಕಂಡರೆ ಅದು ಮಳೆಗಾಲದ ನೀರದಾರಿಯೆಂದೇ ಲೆಕ್ಕ. ಹೀಗೆ ದೊಡ್ಡದೊಡ್ಡ ಕಲ್ಲುಗಳ ಮೇಲಿಂದ ಭೋರ್ಗರೆತದ ಖಾಸಾ ಆಲಾಪದೊಂದಿಗೆ ಧುಮ್ಮಿಕ್ಕುವ ಜಲಧಾರೆ ಮೋಹಕ ಜಲಪಾತವಾಗಿ ಕಣ್ತಣಿಸುತ್ತದೆ. ಇಂಥವುಗಳಿಗೆ ಹೆಸರ ಹಂಗಿಲ್ಲ. ಸೀಮಿತ ಅವಧಿಯ ಕೊಡುಗೆ ಎಂಬಂತೆ ಇವುಗಳನ್ನು ಸೀಮಿತ ಅವಧಿಯ ಜಲಪಾತ ಎನ್ನಬಹುದಷ್ಟೆ!

ನಮ್ಮೂರ ಬಳಿ ಕಂಡ ಮಳೆಗಾಲದ ಜಲಪಾತದ ಚಿತ್ರವಿದು.

******

ಮಳೆ, ಹೂವು, ಕವಿತೆ, ಹಕ್ಕಿ, ದುಂಬಿ,.. ಇವುಗಳಿಗೆಲ್ಲ ಏನೋ ಬಿಡಿಸಲಾಗದ ಬಂಧ ಇರುವಂತೆ ಒಮ್ಮೊಮ್ಮೆ ತೋರುತ್ತದೆ. ಇನ್ನೂ ಮುಂದುವರಿದು ತೊಟ್ಟಿಲು,ನಕ್ಷತ್ರ, ಕಡಲು, ಹಿಮರಾಶಿ, ಮಸಣಭೂಮಿಗಳೂ ಒಂದಕ್ಕೊಂದು ಬೆಸೆದುಕೊಂಡಿವೆಯೆಂದೂ, ಅವು ಇವುಗಳಿಗೆ, ಇವು ಅವುಗಳಿಗೆ… ಅಥವಾ ಇವೆಲ್ಲ ಒಂದೇ ಚಕ್ರದ ಸುರುಳಿಗಳೆಂದು, ಕಾಲಘಟ್ಟದ ನಿಲ್ದಾಣಗಳೆಂದು.., ಹೀಗೇ ಒಮ್ಮೊಮ್ಮೆ ಅನಿಸಿದರೆ ಇವುಗಳಲ್ಲೇ ಬೆರೆತ ಬದುಕಿನಿಂದ ಒಂದಷ್ಟು ಆಚೆನಿಂತು ಒಂದು ಬೊಗಸೆ ನಿರಾಳತೆಯ ಮೊಗೆದು ಸ್ವಂತವಾಗಿಸಿಕೊಳ್ಳಬೇಕು ಅನ್ನಿಸುವಷ್ಟು ವ್ಯವಧಾನ ಒಂದೊಮ್ಮೆ ಸಿಕ್ಕರೂ ಮಗದೊಮ್ಮೆ ಕೈಗೆ ಸಿಗದ ದುಂಬಿಯಂತೆ ಹಾರಿ ದೂರದಿಂದ ಜೀವತಣಿಸುವ ಸಾಧ್ಯತೆ, ಸಂಭವನೀಯತೆಗಳ ತ್ರಾಣ ಗೋಚರಕ್ಕೆ ಸಿಗುವಷ್ಟು ಹತ್ತಿರವಾಗುತ್ತದೆ.

ಕೆಂಪುಕರವೀರವ ಆಲಂಗಿಸುತ್ತಿರುವ ಇರುವೆ

******

ಅಕ್ಕನ ಮದುವೆಯ ನೆಪದಲ್ಲಿ ಕೊಂಡ ಹೊಸ ಕ್ಯಾಮರಾ ಫೋಟೊಗ್ರಫಿ ಬಗ್ಗೆ ಒಂದಷ್ಟು ಆಸಕ್ತಿಯನ್ನು ನನ್ನಲ್ಲಿ ತುಂಬುತ್ತಿದೆ. ಮಳೆಗಾಲದ ರಸ್ತೆ, ಕೆಂಪಗೆ ಹರಿವ ಹಳ್ಳ, ಮುಗಿಲ ಮುತ್ತುವ ಮರಗಳು, ಕಡಲ ಕೂಡುವ ನದಿ, ನೆರಳು-ಬೆಳಕು.., ಇವೆಲ್ಲ ಪರಿಚಿತ ಕಣ್ಣಿಗೆ ಮತ್ತೂ ಹೊಸತೇನೋ ಎಂಬಂತೆ ಗೋಚರಿಸಲಾರಂಭಿಸಿವೆ.

ಕುಮಟಾ-ಶಿರಸಿ ಮಾರ್ಗ ಮಧ್ಯದ ಸದಾ ಹಾಲ್ನೊರೆಯಂತ ಮೋಡಗಳಿಂದಾವ್ರತವಾಗಿರುವ ’ದೇವಿಮನೆ’ ಎಂಬಲ್ಲಿ ಸೆರೆಸಿಕ್ಕ ದೃಶ್ಯವಿದು.

******

ಕಾಲ ಬದುಕನ್ನು ನಡೆಸುತ್ತದೆ ಅಥವ ಕಾಲದೊಂದಿಗೆ ಬದುಕು ದಿನದಿನ ಹೊಸ ಮಗ್ಗುಲುಗಳನ್ನು ತೆರೆದುಕೊಳ್ಳುತ್ತ ಅಲ್ಲಲ್ಲಿ ತಿರುವು ಪಡೆದು ನಡೆಯುತ್ತದೆ. ಮರದ ಬೇರು ಭುವಿಯಡಿ ನೀರರಸುವಂತೆ ಹರಿಯುತದೆ ಮನ ಕಾಣದ ಕವಿತೆಯ ಒಡಗೂಡಿ. ದಾರಿ, ನೌಕೆ, ತಿರುವು, ರಸ್ತೆ ಮುಂತಾದ ಖಾಯಂ ಬಳಕೆಯ ಶಬ್ಧಗಳು ಖಾಲಿಯಾದಷ್ಟೂ ಮತ್ತೂ ಉದ್ರಿ ಸಿಗುತ್ತವೆ!

ದೋಣಿಸಾಗಲಿ ಮುಂದೆಹೋಗಲಿ..


ಊರ ನೆರೆಯ ಹೊಳೆಯಂತೂ ಮೈದುಂಬಿದೆ. ಬೆದರಿಸುವ ಮಣ್ಣುಗೆಂಪು ನೀರನ್ನು ಹುಟ್ಟಿನಿಂದ ಕದಡುತ್ತ ಈಚೆದಡದಿಂದ ಆಚೆಗೆ ಮತ್ತು ಆಚೆದಡದಿಂದ ಈಚೆಗೆ ಜನರನ್ನು ಸಾಗಿಸುವ ದೋಣಿಯವ ವಾಸ್ತವದಿಂದ ಅವಾಸ್ತವತೆಗೂ, ಮಾರ್ಮಿಕತೆಗೂ ಕೊಂಡೊಯ್ದುಬಿಡುತ್ತಾನೆ. ಮೋಹನ ಮುರಳಿಯ ಕರೆಗೆ ಓಗೊಟ್ಟು ಓಡೋಡಿ ಬರುವ ಹಸುಕಂದಮ್ಮಗಳಂತೆ ಅದೆಲ್ಲೋ ದೂರದ ಕಡಲ ಅಲೆಯ ನಾದಕೆ ಮನಸೋತು ಸೆಳೆಯುತ ಹರಿವ ಹನಿಹನಿ ಅಘನಾಶಿನಿ ದಡದುದ್ದಕ್ಕೂ ಜೀವನಾಡಿಯ ಮಿಡಿಸುತ್ತದೆ, ಬದುಕನ್ನು ತೊಟ್ಟಿಕ್ಕಿಸುತ್ತದೆ.

******

ತಾಜಾಮಳೆ ಮಿಂದ ದಾರಿಯ ಒದ್ದೆನೋಟ


ಭಾವುಕತೆಯ ಮಳೆಯಲಿಮಿಂದ ಬಯಲದಾರಿಗೆ ಒದ್ದೆನೋಟವೇ ಗತಿ!

******

— ರಾಘವೇಂದ್ರ ಹೆಗಡೆ

ದಿನದಿನವು ಹೊಸತಹುದು..


ದಿನದಿನವು ಹೊಸತಹುದು,
ದಿನದಿನವು ಹಳತಹುದು
ಹೊಸತದುವೆ ಹಳತದುವೆ
ಭೇದವುಂಟೇನು?
ಇರುವೆನೆಂಬುದು ಹಳಮೆ
ಬರುವೆನೆಂಬುದು ಹೊಸಮೆ
ಒಂದೆಕಾಲದ ಮಾತು
ಹಿಂದೆ ಮುಂದೆ!

ಶಾಲಾದಿನಗಳಲ್ಲಿ ಓದಿದ್ದ ಕವಿತೆಯ ಸಾಲುಗಳಿವು. ’ಇರುವೆನೆಂಬುದು ಹಳಮೆ, ಬರುವೆನೆಂಬುದು ಹೊಸಮೆ’ ಎಂಬ ಸಾಲು, ಮುಂಜಾವಿನ ಸಣ್ಣ ಗಾಳಿಯಲ್ಲಿ, ಧಾವಂತದ ದಾರಿಯಲಿ ಮುಗ್ಗರಿಸಿದಲ್ಲಿ, ತರಚುಗಾಯ ಮಾಡಿಕೊಂಡಲ್ಲಿ, ಗಾಯ ಮಾಗಿ ಕಲೆ ಉಳಿದಲ್ಲಿ, ಒಂದಕ್ಕೊಂದು ಪ್ರತಿಸ್ಪರ್ಧಿಸುವಂತೆ ಓಡೋಡಿ ಮಿಂಚುವ ಗಡಿಯಾರದ ಮುಳ್ಳುಗಳಲ್ಲಿ, ಬಿಸಿಲು-ಮಳೆಯಲ್ಲಿ…. ಹೀಗೆ ಎಲ್ಲೆಂದರಲ್ಲಿ ದಿನದಿನ ಎದುರಾಗುತ್ತ, ಕಾಡಿ ಮನದ ಪುಟಗಳಲ್ಲಿ ಅಚ್ಚಾಗಿಕುಂತಿದೆ. ಆದರೆ ಅದನ್ನು ಬರೆದ ಕವಿಯ ಹೆಸರು ಸ್ಪಷ್ಟವಾಗಿ ನೆನಪಿರದುದಕ್ಕೆ ಬೇಸರವಿದೆ.

****

ನಾಳೆಯಿಂದ ಹೊಸ ಕ್ಯಾಲಂಡರ್ ವರ್ಷ. ಗೋಡೆಯ ಮೇಲೆ ನೇತುಹಾಕಿಟ್ಟ ದಿನದರ್ಶಿಕೆ ನಿವೃತ್ತವಾಗಿ ಮತ್ತೊಂದು ಆವರ್ತನಕೆ ಸಜ್ಜಾಗಿದೆ. ವರ್ಷಗಳಿಂದ ಅಂಟಿಕೊಂಡ ಧೂಳು ಗಂಟು ಬಿಡಿಸಿದಂತೆ ಮುಕ್ತವಾಗುತ್ತಿದೆ….

ಇರುಳು ಅಸುನೀಗುತ್ತದೆ
ಮುಂಜಾವ ಮರುಹುಟ್ಟಿನೊಂದಿಗೆ
ತೆರೆದುಕೊಳ್ಳಲು..
ಇದು ಮುಗಿಯದ ಕಥೆ-
ಮುಗಿಯುವುದು
ಬದುಕ ಸಾಲುಗಳಷ್ಟೆ..!

ತಮ್ಮೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ(ಕ್ರಿಸ್ತ ವರ್ಷ 2011) ಹಾರ್ದಿಕ ಶುಭಾಶಯಗಳು.

ಶುಭಾಶಯ

— ರಾಘವೇಂದ್ರ ಹೆಗಡೆ