ಮತ್ತೆ ಮತ್ತೆ ಕವಿತೆ


ಹರಿದು ಬಿಡು ಸುಮ್ಮನೆ
ಕಣ್ಣೀರು ನನ್ನೆದೆ ತಲುಪದಂತೆ
ಬರೆದುಬಿಡು ಒಮ್ಮೆಗೆ
ಕವಿತೆ ಮತ್ತೆ ನೆನಪಾಗಿ ಕಾಡದಂತೆ

ನನ್ನ ಮೋಡದ ಬುಟ್ಟಿ
ತಳಒಡೆದು ಹನಿಸುವಲ್ಲಿ
ನಿನ್ನ ಒನಪಿನ ಕುಡಿಕೆ
ಮನದ ಮುಗಿಲೊಳು ಬಿರಿಯೆ
ಚಿತ್ತಭಿತ್ತಿಯೊಳಿನ್ನಾವ ಮೂರ್ತರೂಪ
ಒಲವ ಭರವಸೆಯೊಂದೆ ಸುಪ್ತದೀಪ?

ನಿನ್ನ ನೋಟದ ಸೆಳೆತ
ನನ್ನೆದೆಯ ನದಿಗಿಲ್ಲ
ನಗುಮೊಗವು ಅಲೆಯುಲಿವ ಕಡಲಿನಂತೆ
ಭೋರ್ಗರೆವ ಮನಸಿನಲಿ
ಸುಡುವ ಬೆಳದಿಂಗಳೊಳು
ತಂಗಾಳಿ ಕವಿಯುವುದೆ ಆಪ್ತ ಕವಿತೆಯಂತೆ?

ತಲುಪಿಲ್ಲ ನಾನಿನ್ನೂ ನಿನ್ನೊಲವಿನ ತಟವ
ಹಾರಬೇಕಿನ್ನು ಕವಿತೆಯೊಳಗಿನ ಸ್ವರದಗೂಡೆ
ಹೂವ ಕಟ್ಟಿದ ದೀಪ ಮೊಗ್ಗಿನೆಸಳನು ಮೀಟಿ
ಮುಸ್ಸಂಜೆರಂಗಂತೆ ಇನ್ನಾದರೂ ನಿನ್ನ ತಲುಪಬಹುದೇ?


ಡಿಸೆಂಬರ್ 3ಕ್ಕೆ ‘ರಾ ಗ ನೌ ಕೆ’ಗೆ 7 ತುಂಬಿತು. ಬರಹಗಳಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

— ರಾಘವೇಂದ್ರ ಹೆಗಡೆ


ದಾರಿ ಕೂಡುವ ಬುಡಕೆ..


ಮೋಡದ ಆವರ್ತನಕೆ
ಕಡಲು ಪೊರೆಯೊಡೆವಂತೆ
ಉಸಿರ ಜ್ವಾಲೆಗೆ ಹನಿವ ಮಳೆಹನಿ ನೀನು

**

ಬಾನ ಮಂಟಪದಲ್ಲಿ
ಘಮಿಪ ಹೂ ಪಕಳೆಯ ಚೆಲ್ಲಿ
ಚಿತ್ತಭಿತ್ತಿಗೆ ಚಿತ್ತಾರವಾದ ನೀನೇ ರಂಗವಲ್ಲಿ

**

ಅನಂತ ಚುಕ್ಕಿ ಬಟ್ಟಲೊಳಗೆ
ಮೊಗೆದಷ್ಟೂ ತೀರದ
ನಿನ್ನ ಮೊಗದ ನಗುವದು ಮುಗಿಯದ ಕವಿತೆ

**

ಒಲವ ಕಿಡಿ ಹಚ್ಚಿದ ಬಿಸಿಗೆ
ನಿನ್ನ ನೋಟದ ಬೆಚ್ಚನೆಯ ಬೆಸುಗೆ
ಬಾನಾಡಿ ನುಲಿದಂತೆ ನಿನ್ನ ಒಲುಮೆ

**

ದಾರಿ ಕೂಡುವ ಬುಡಕೆ
ನಿನ್ನ ಹೆಜ್ಜೆ ಗುರುತಿನ ಹೊದಿಕೆ
ಬರೆಯಬೇಕಿಲ್ಲ ಮತ್ತೆ ಧರೆಯ ಸೊಬಗು

**

ವರುಷ ಆರು ಹರುಷ ನೂರು..!


‘ರಾ ಗ ನೌ ಕೆ’ ಗೆ ಇವತ್ತಿಗೆ ಆರು ತುಂಬಿತು. ಈ ಪಯಣದಲ್ಲಿ ಸಿಕ್ಕಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇಲ್ಲಿ ಏನೂ ಬರೆಯದೇ ಅದೆಷ್ಟು ಬೇಗ ವರ್ಷವೊಂದು ಉರುಳಿಹೋಯ್ತಲ್ಲ ಎಂಬ ಖೇದವಿದೆ. ಇಲ್ಲಿ ಬಂದು ಹೋಗದಷ್ಟು ಬ್ಯುಸಿ ಆಗಿಬಿಟ್ಟೆನಾ ಅಥವಾ ಸೃಜನಶೀಲತೆಯ ವ್ಯವಧಾನ ಬತ್ತಿ ಹೋಗಿದೆಯಾ ಎಂಬೆಲ್ಲ ಯೋಚನೆಗಳು ಆಗಾಗ ಬಂದು ಕಾಡುವುದಿದೆ.

to blog
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಎಂಬುದೊಂದೇ ಈ ಹೊತ್ತಿನ ಅರಿಕೆ.

–ರಾಘವೇಂದ್ರ ಹೆಗಡೆ


ಇವುಗಳನ್ನೂ ನೋಡಿ:

ಮೋಡದ ಮೇಲೊಂದು ವರ್ಷದ ನಡಿಗೆ..

ಒಂದು, ಎರಡು..

ಮೂರು..

ಭ್ರಮೆ ಮತ್ತು ಕವಿತೆ

ವರ್ಷ ಐದಾಯ್ತು!


ವರ್ಷ ಐದಾಯ್ತು!


shot from aghanashini bridge

ಡಿಸೆಂಬರ್ ೩ ಕ್ಕೆ ‘ರಾ ಗ ನೌ ಕೆ’ ಗೆ ಐದು ತುಂಬಿತು! ತಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ 🙂


ಇವುಗಳನ್ನೂ ಓದಿ:

  1. ಮೋಡದ ಮೇಲೊಂದು ವರ್ಷದ ನಡಿಗೆ..

  2. ಒಂದು, ಎರಡು..

  3. ಮೂರು..

  4. ಭ್ರಮೆ ಮತ್ತು ಕವಿತೆ


— ರಾಘವೇಂದ್ರ ಹೆಗಡೆ

ಕರ್ಮ: ಒಂದು ಅವಲೋಕನ


karma by karnam pavan prasad
ವಿದ್ಯೆ ಕಲಿಯುವುದು ಅತ್ಯವಶ್ಯ. ಜವಾಬ್ದಾರಿಯುತ ಸತ್ಪ್ರಜೆಯಾಗುವುದೂ ಅಷ್ಟೇ ಮುಖ್ಯ. ಆದರೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಹಾನಗರ ಸೇರಿ ತೀರ ವೈಭೋಗದ ಜೀವನ ನಡೆಸಬೇಕೆಂಬ ಭರದಲ್ಲಿ ತಾವೆತ್ತ ಸಾಗುತ್ತಿದ್ದೇವೆ ಎಂಬುದರ ಪರಿವೆ ಇಂದು ಅದೆಷ್ಟೋ ಯುವಜನರಲ್ಲಿ ಇಲ್ಲವಾಗಿದೆ. ವೀಕೆಂಡ್ ಮಸ್ತಿಯ ಹೆಸರಲ್ಲಿ ಸಹವಾಸದೋಷದಿಂದ ಅದೆಂಥೆಂತದೋ ದುಶ್ಚಟಗಳಿಗೆ ದಾಸರಾಗಿ ಅತ್ತ ಗುರುವೂ ಇಲ್ಲದೇ ಇತ್ತ ಗುರಿಯೂ ಇಲ್ಲದೇ ತ್ರಿಶಂಕು ಸ್ವರ್ಗದಲ್ಲಿ ತೇಲುವ ಅನೇಕ ಜನ ನಮಗೆ ಕಾಣಸಿಗುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ಲಿವಿಂಗ್ ಟುಗೆದರ್ ಪದ್ದತಿ ಇಂದು ಈ ಮಣ್ಣಿನ ಸ್ವಾಸ್ಥ್ಯವ ನ್ನೂ ಕೆಡಿಸುತ್ತಿದೆ. ಇಂತಹ ಅಂಶಗಳನ್ನೊಳಗೊಂಡ ’ಕರ್ಮ’, ಯುವ ಬರಹಗಾರ – ನಾಟಕಕಾರ ಕರಣಂ ಪವನ್ ಪ್ರಸಾದ್ ರ ಚೊಚ್ಚಲ ಕಾದಂಬರಿ.

ತನ್ನ ತಂದೆಯ ಸಾವಿನ ವಿಷಯವನ್ನು ತಿಳಿದ ಸುರೇಂದ್ರ ಬಹುವರ್ಷಗಳ ನಂತರ ಈಗ ತನ್ನ ಹುಟ್ಟೂರಿಗೆ ಬರುತ್ತಾನೆ. ಪುರೋಹಿತರೂ, ವಿದ್ವಾಂಸರೂ ಆಗಿದ್ದ ತಂದೆಯವರ ಅಪರ ಕರ್ಮವನ್ನು ಜ್ಯೇಷ್ಠ ಪುತ್ರನಾದ ಅವನೇ ಮಾಡಬೇಕೆಂದು ನಿರ್ಣಯವಾಗುತ್ತದೆ. ಮುಂದಿನ ಹದಿನೈದು ದಿನ ನಡೆವ ಘಟನೆಗಳೇ ಕಥೆಯ ಹಂದರ. ಬ್ರಾಹ್ಮಣ ಸಮುದಾಯದಲ್ಲಿ ನಡೆವ ಅಪರ ಕ್ರಿಯಾಚರಣೆಯ ವಿಧಾನವನ್ನು ಕಥೆಯ ಸನ್ನಿವೇಶಗಳೊಂದಿಗೆ ಕಟ್ಟಿಕೊಟ್ಟ ಪರಿ ಅದ್ಭುತ. ಕಥೆಗನುಗುಣವಾಗಿ ಅಲ್ಲಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ತಾತ್ಪರ್ಯಗಳನ್ನು ಬಳಸಲಾಗಿದೆ. ಆ ಹದಿನೈದು ದಿನಗಳಲ್ಲಿ ಕಥಾನಾಯಕ ಸುರೇಂದ್ರನ ಮನದಲ್ಲಿ ಉಂಟಾಗುವ ಗೊಂದಲ, ದುಃಖ, ಹೊಯ್ದಾಟ, ಆಸಹಾಯಕತೆ, ಭಯ, ಅಪರಾಧಿ ಭಾವ, ಜಿಜ್ಞಾಸೆ ಮುಂತಾದವೆಲ್ಲ ಕಥೆಯ ವಿವಿಧ ಕೋನಗಳಲ್ಲಿ ಹಾದು ಹೋಗುತ್ತವೆ. ಸಂದರ್ಭೋಚಿತವಾಗಿ ಉಲ್ಲೇಖಿಸಿದ ಗರುಡಪುರಾಣದ ಅರ್ಥ ವಿವರಣೆ ಓದಲು ಮತ್ತಷ್ಟು ಖುಷಿ ಕೊಡುತ್ತದೆ.

ನಾಳೆ ತನ್ನ ಕ್ರಿಯಾಚರಣೆ ಮಾಡುವವರು ಯಾರೂ ಇಲ್ಲ ಎಂಬ ಭಾವನೆ ಸುರೇಂದ್ರನಲ್ಲಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತದೆ ಅಲ್ಲದೇ ತನ್ನ ಮತ್ತು ಪತ್ನಿಯ ಸಂಬಂಧದಲ್ಲಿಲ್ಲದ ನೈತಿಕ ಗಟ್ಟಿತನದ ಬಗ್ಗೆ ಅವಲೋಕಿಸಿ ಭಯ ಮತ್ತು ಹೇಸಿಗೆಯಾಗುತ್ತದೆ. ಅಪರ ಕರ್ಮಗಳೆಲ್ಲ ಮುಗಿದ ಮೇಲೆ ಸುರೇಂದ್ರನಿಗೆ ತಾನು ಕ್ರಿಯಾಚರಣೆ ಮಾಡಿದ್ದು ತನಗೆ ಜನ್ಮವಿತ್ತ ತಂದೆಯದ್ದಲ್ಲ ಎಂಬ ಕಠೋರ ಸತ್ಯದ ಅರಿವಾಗುತ್ತದೆ. ಅಷ್ಟರಲ್ಲಿ ಅವನ ತಮ್ಮ ನರಹರಿ ಅಮ್ಮ ತೀರಿಹೋಗಿಬಿಟ್ಟ ವಿಷಯವನ್ನು ತಿಳಿಸುತ್ತಾನೆ. ಮಹಾನಗರ ಬಿಟ್ಟು ಅಜ್ಞಾತವಾಸಕ್ಕೆ ಬಂದಂತಾಗಿದ್ದವನಿಗೆ ಈಗ ಎಲ್ಲ ಮುಗಿದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಕಸ್ಮಾತಾಗಿ ಮತ್ತೊಂದು ಕರ್ಮ ಬಂಧನ ಕಟ್ಟಿಹಾಕುತ್ತದೆಯೇ ಎಂಬುದನ್ನು ಓದುಗರ ವಿವೇಚನೆಗೆ ಬಿಡಲಾಗಿದೆ.

ಕಥೆಯ ಸಲುವಾಗಿನ ಲೇಖಕರ ಅಧ್ಯಯನವನ್ನು ಮೆಚ್ಚಲೇಬೇಕು. ಅವರು ಹಲವುಕಡೆ ಪಾತ್ರದ ಒಳಹೊಕ್ಕು ಬರುವಲ್ಲಿ ಯಶಸ್ವಿಯಾಗುತ್ತಾರೆ. ಕುತೂಹಲವನ್ನು ಉಳಿಸಿಕೊಂಡು, ಕೊನೆಯವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಕಥೆ ಯಶಸ್ವಿಯಾಗುತ್ತದೆ. ಪ್ರಸಿದ್ದ ಬರಹಗಾರ ಓದುಗರ ಮೇಲೆ ತನ್ನ ಬರವಣಿಗೆಯ ಮೂಲಕ ಪ್ರಭಾವ ಬೀರುವುದು ಸಹಜ. ಹೊಸಬರಲ್ಲಿ ಸೃಜನಶೀಲ ಬರವಣಿಗೆಯ ಸ್ಪುರಣೆಗೆ ಅವು ಅವಶ್ಯ ಕೂಡ. ಅದರಂತೆ ಇಲ್ಲಿ ಭೈರಪ್ಪನವರ ಪ್ರಭಾವ ಲೇಖಕರ ಮೇಲೆ ಆದಂತೆ ಒಮ್ಮೊಮ್ಮೆ ಅನಿಸುತ್ತದೆ. ಯುವ ಬರಹಗಾರರೆಂದರೆ ಮೂಗು ಮುರಿಯುವ ಇಂತಹ ದಿನಗಳಲ್ಲಿ ’ಕರ್ಮ’ ಕನ್ನಡ ಸಾರಸ್ವತ ಲೋಕದಲ್ಲಿ ಹೊಸಬರ ಬಗ್ಗೆ ಭರವಸೆ ಮೂಡಿಸುತ್ತದೆ.

ಪುಸ್ತಕ: ಕರ್ಮ (ಕಾದಂಬರಿ)
ಲೇಖಕರು: ಕರಣಂ ಪವನ್ ಪ್ರಸಾದ್
ಪ್ರಕಾಶನ: Concave Media
ಬೆಲೆ: 125 (ಮೊದಲ ಮುದ್ರಣಕ್ಕೆ ಅನ್ವಯಿಸುವಂತೆ)


— ರಾಘವೇಂದ್ರ ಹೆಗಡೆ

ಹಾದಿಯೊಂದರ ಹಾಡು


ಹಾದಿಯೊಂದರ ಹಾಡು

ಈ ಹಾದಿಯಲ್ಲೀಗ ಕೋಗಿಲೆ ಮಡಿದಿದೆ
ಹಸಿನೆನಪ ಹಾವಳಿಗೆ ಬಿರಿದು ಮೋಡ ತುಸು ಬಿಕ್ಕಿದೆ

ಎದೆಯ ಜೋಗುಳ ಮೊರೆವ ಕಾನನ
ಮೌನ ಸರಣಿಯ ಮಂಥನ
ಕೊರೆವ ಹೆಸರ ಬರೆವ ಉಸಿರೇ
ನೋವ ಕವಿತೆಗೆ ಬಂಧನ

ಹರಿಯಲಿಲ್ಲ ಹನಿಸಲಿಲ್ಲ
ಅಬ್ಧಿಯಂಗಳ ಪಾತ್ರಕೆ
ಉರಿಯಲಿಲ್ಲ ಆರಲಿಲ್ಲ
ಮರೆತು ಹೊರಟ ಮಾತ್ರಕೆ

ತಡಿಯ ಮೋಹ ಕಡಲ ನೋವ
ಬಲ್ಲ ಹೆಜ್ಜೆಗೆ ಯಾವ ಪಾಡು
ನೀಲ ಸ್ಥಂಭಿನಿ ಭಾವ ಸ್ಪಂದಿನಿ
ಭ್ರಮಿಪ ಮಾತ್ರಕೆ ಯಾವ ಹಾಡು?

ಅಡ್ಡ ಸಾಲಿನ ಉದ್ದ ಪದಕೆ
ಇನ್ನು ಬದ್ದವದಾವ ಸಂಕಲ್ಪ?
ಚೂರು ಚೂರೇ ಜಿಟಿವ ಮಳೆಗೆ
ಬಿದ್ದರೂ ಕವಿತೆಗೆ ನೋವು ಅಲ್ಪ ?

ತಿರುಗಿ ಅರಳದ ಕನಸ ಹೂವಿಗೆ
ಪಡಿಯಚ್ಚುಳಿದು ಅಳಿಸದ ಹೆಸರ ಗುಂಗು
ದೂರವಾದ ಹಾಡಿನೆದೆಗೆ
ಮತ್ತೇಕೆ ನನ್ನ ಪದದ ಹಂಗು?

-ರಾಘವೇಂದ್ರ ಹೆಗಡೆ

ಈ ಕವಿತೆ ‘ಪಂಜು‘ವಿನಲ್ಲಿ ಪ್ರಕಟಗೊಂಡಿದೆ.