Monthly Archives: ಅಕ್ಟೋಬರ್ 2011
ಕನ್ನಡಿ ರೆಕ್ಕೆ
ಯಾರೋ ಹಚ್ಚಿ ಹೋದ ಕಿಡಿಗೆ
ಸುಟ್ಟ ಮಣ್ಣ ಬದಿಬದಿಯೆಲ್ಲ
ಹಾದಿಯೆಂದು ಹೊರಟು
ನಿಟ್ಟುಸಿರಿಟ್ಟು ಕೊಂಚ
ದೂರದಿ ಕಾಯುತಿದೆ ಹಣತೆ
ಆಹ್ವಾನಿಸುತ ಎಂಬಂತೆ
ಆವಾಹನೆಯಾದ ಸ್ಥರಗಳಿಗೆಲ್ಲ
ಭರತ ಇಳಿತಗಳು
ಇಲ್ಲಿ
ಉಸಿರಾಟದ ಪರಿಕರಗಳು.
ಕಂಡದ್ದು ಹಣತೆಯಲ್ಲ
ಹಣತೆಯೆಂಬ ಭ್ರಮೆ
ತೆರೆಗಳ ನಡುವೆ ಬಿದ್ದು
ಹಿಂದೆ ಮುಂದೆ ಹೊಯ್ದಾಡುವ
ಕವಿತೆಯ ಶಮೆ
ಕತ್ತುರಿದು ಬಿದ್ದ ಕಿಡಿ
ಊರಲ್ಲ
ಹಾನತೆಗೆದೆಳೆಯಲು ತೇರಿಲ್ಲ
ಅಗ್ರವಾಗಿ ಕಂಡದ್ದೆಲ್ಲ ಉಗ್ರವಾಗಿ
ಮರಳಿಗಿಳಿಯಲು ಅಡ್ಡಡ್ಡ ಸೀಳಿ
ಕಾಲ್ತಡೆಸುತ್ತ ವ್ಯಘ್ರವಾಗಿ
ಮಿಸುಕಾಡುವ ನಡಿಗೆ
ಧರೆಗೂ
ತುಸುತಾಪ ಅಡಿಗೆ.
ಜಾರಿಸರಿದವುಗಳು ಹಲವು
ಹಾರಿದವು ಮರೆತು ದೂರ
ಅರೆಮಬ್ಬಿನಲಿ ಮುರಿದ
ರೆಕ್ಕೆಯ ಬಳಚುತ್ತ
ಹಾರಲೆತ್ನಿಸಿದ್ದು ಬರಿ ಕವಿತೆಯಲ್ಲ
ಕೊಳದ ತಿಳಿನೀರಲ್ಲಿ ಕಾಣುವ
ಕಟುವಾಸ್ತವ
ಅದಕ್ಕೆ ನೋವಿದೆ
ಅಲ್ಲಲ್ಲ ತುಸು ನೆಮ್ಮದಿಯಿದೆ
ಮೋಡ ನೀನಳಬೇಡ
ಮುರಿಯದಿರಲಿ ಮತ್ತೊಂದು ರೆಕ್ಕೆ
******
— ರಾಘವೇಂದ್ರ ಹೆಗಡೆ
******
ಕೊ: ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.. 🙂
******
[image source: picassaweb]
******
ಬಿಂಬ
ವರಾತ ತೆಗೆದ ಮಣ್ಣಿಗೆ ಹರಳಹುಚ್ಚು
ಗಾಳಿ ತೂರಿದ್ದು ಎಲೆಯಿರಬೇಕು
ಅಂದುಕೊಂಡದ್ದು ಕೊಂಚ ಹೆಚ್ಚು
ಊರಾಚೆಯ ತೊರೆ ಕಣ್ಣು ಕುಕ್ಕುವಾಗ
ನೆತ್ತಿ ಸುಡುವ ನಡು ಮಧ್ಯಾನ್ನ್ಹ
ಹನಿ ಹೊತ್ತ ಹೆಸರಲಿ
ಅಲೆಯಬೇಕೆಂದು ಬಿಟ್ಟು ಉದ್ಯಾನ
ಮನಸು ಉರಿವ ಕರ್ಪೂರ
ಹೊತ್ತು ತೇಲುವ ಕೆಸುವಿನೆಲೆ
ಅಕೋ ಆ ತೀರದಿ ತೀರದ ಹೊಸನೆಲೆ?
ಕನ್ನಡಿಯಲ್ಲಿ ಕಂಡ ಮುಖ
ಮುಖವೇ ಹೌದಾ..,? ಅನುಮಾನ
ಮುಖದ ಮೇಲಲ್ಲ ಕನ್ನಡಿಯ ಮೇಲೆ
ಇಟ್ಟರೂ ಮತ್ತೆ ಮತ್ತೆ
ಉಸಿರ ಬೆರಳಚ್ಚು
ಅರೆ ಯಾಕೋ ಬೇರೆಯದೇ
ಕಾಣುವುದಲ್ಲ ಬರೆವ ನೆರಳಚ್ಚು
ಕಾಮನಬಿಲ್ಲು ನೋಡಿದ ಕಣ್ಣು
ನೀರಿಗಿಣುಕಿ ಬಿಂಬಕೆ ಮುಖವೊಡ್ಡಿದರೆ
ಅಲ್ಲಿ ಕಂಡದ್ದು ಮೋಡದಡಿ
ಪದರಪದರವಾಗಿ ಚಡಪಡಿಸುತಿರುವ ಹಗಲು.
******
ಕೊ: ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
******
— ರಾಘವೇಂದ್ರ ಹೆಗಡೆ