ಬ್ಲಾಗ್ ಸಂಗ್ರಹಗಳು

ಬೆಳಕ ಹನಿ


ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಈ ಹಾಳು ಮಾಘಿಗೇನು ಗೊತ್ತು
ಹೂ ಎಸಳ ಮೇಲೆ ಹಾಸಿದ್ದು
ನಿನ್ನ ಕಣ್ಬೆಳಕೆಂದು

ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಗಾಳಿ ಘಮಲಿನಲಿ
ತಿಳಿನೀಲಿ ನೀರಿನಲಿ
ಮುಖವಿರದ ಕನ್ನಡಿಯಲಿ
ಇಣುಕಿದ್ದು ಕನಸಾ, ನೀನಾ?

ನೋಡು ಮತ್ತೆ
ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಆವರಿಸು ದಿನವ
ಸಾವರಿಸು ಕಥನ
ಕನವರಿಕೆಗೆ ಉಳಿದೇ ಹೋಗಲಿ
ಒಂದು ಹನಿ – ಕವನ

ಸೂರ್ಯ ಕಡಲ ಹಾದು
ಬರುವಂತೆ ನಿತ್ಯ;
ಚಂದ್ರ ಇರುಳ ಕಡೆದು
ಹೊಳೆವಷ್ಟೇ ಸತ್ಯ
ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ!

— ರಾಘವೇಂದ್ರ ಹೆಗಡೆ

ಒಂದು, ಎರಡು……


ಇಡಿಯ ಪುಟದಿ ಖಾಲಿ ಪದ
ಬಣ್ಣ ನೀನೆ ಅಕ್ಷರ,
ಜಗದಲೆಲ್ಲಿ ಒಂದೆ ಹದ
ಎಲ್ಲ ತಾನೆ ನಶ್ವರ..?!

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., ಹಬ್ಬಿ ನಗಲಿ ಪ್ರೀತಿ

***

ಹೂವ ಹಂಗು ಯಾಕೆ ಬೇಕು
ನೋವು ನುಂಗಿ ಹಾಡಲು?
ಹೊಳೆಯ ಹೊದಿಕೆ ಮಾತ್ರ ಸಾಕು
ನೆರಳಿಗೆ ನಿರಾಳದಿ ಮೈಚಾಚಲು.!

ಕೊಡುವುದೇನು ಕೊಂಬುದೇನು ಒಲವು-ಸ್ನೇಹ-ಪ್ರೇಮ..

***

ತೆರೆದ ತೀರದ ಗುಡಿಯ
ಹೊನ್ನ ಬಾನ್ಮುಡಿ ಕವಿತೆ
ಹೊಸಿಲ ಕಿಟಕಿ ರಂಗವಲ್ಲಿಯ
ಗಂಧಗಂಧದಲಿರಲಿ ನಿನ್ನ ಸ್ಮಿತೆ..

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು..

***

— ರಾಘವೆಂದ್ರ ಹೆಗಡೆ

******

* ‘ರಾ ಗ ನೌ ಕೆ’ ಯಾನ ಶುರುವಾಗಿ ಇಂದಿಗೆ ಎರಡು ಸಂವತ್ಸರಗಳು ಕಳೆದಿವೆ. ನನ್ನ ಬರಹಗಳಿಗೆ ಪ್ರೋತ್ಸಾಹ ನೀಡಿದ ಸರ್ವರಿಗೂ ಕೃತಜ್ಞತೆಗಳು. 🙂

* ಇದನ್ನೂ ಓದಿ: ಮೋಡದ ಮೇಲೊಂದು ವರ್ಷದ ನಡಿಗೆ..

* ಮೇಲಿನ ಚಿತ್ರಗಳ ಅಡಿಬರಹಕ್ಕೆ ಬಳಸಿಕೊಂಡಿರುವ ಸಾಲುಗಳು ಮತ್ತು ಚಿತ್ರಸ್ಥಳ :

(೧) ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., : ಕೆ. ಎಸ್. ನರಸಿಂಹ ಸ್ವಾಮಿ
ಚಿತ್ರ: ಕುಮಟಾ – ಮೂರೂರು ಮಾರ್ಗದಲ್ಲಿ

(೨) ಕೊಡುವುದೇನು ಕೊಂಬುದೇನು.. : ಗೌರೀಶ್ ಕಾಯ್ಕಿಣಿ
ಚಿತ್ರ: ನನ್ನ ಹುಟ್ಟೂರು ಕತಗಾಲ ಸನಿಹ ಹರಿವ ಅಘನಾಶಿನಿ ನದಿ

(೩) ಉದಯಾಸ್ತಗಳಲಿ.. : ಕೆ. ಎಸ್. ನಿಸಾರ್ ಅಹಮದ್
ಚಿತ್ರ: ಸುರತ್ಕಲ್ ಸನಿಹ ಸೆರೆಯಾದ ಸೂರ್ಯಾಸ್ತ

******

— ರಾಘವೇಂದ್ರ ಹೆಗಡೆ.