ಬ್ಲಾಗ್ ಸಂಗ್ರಹಗಳು
ಮೂರುಸಂಜೆ ದೀಪ
ಚೂರು ಚೂರಾಗಿ ಬಿಕ್ಕಿ ಹಾರುವ
ಮೋಡ ನಿನ್ನ ಜಿಟಿಜಿಟಿ
ಒಂಟಿಹಾದಿಗೆ ಮೂರುಸಂಜೆಯ ದೀಪ
ಅನಂತದ ತಿಳಿನೀಲಿ ಬಣ್ಣದಂತೆ ಹೊಳೆದು
ಟೆರೆಸ್ ಹತ್ತಿ ಕೂತು ನಿನ್ನ ಅಣಕಿಸುವ
ಡ್ಯೂರಶೈನ್ ಶೀಟು
ಒಂದು ಹುಲ್ಲೂ ಹುಟ್ಟದ
ಕಾಂಕ್ರೀಟು ರೋಡುಗಳನೆಲ್ಲ
ಬೈಪಾಸ್ ಹಾಯದೇ ಕ್ಷಮಿಸಿಬಿಡು.
ಆ ಬೋಳುಗದ್ದೆಯಲ್ಲಿ ಜಮಾನದಲ್ಲಿ
ಭತ್ತ ಬೆಳೆಯುತ್ತಿದ್ದರು
ಅಕೋ ಆ ಹಣೆಪಟ್ಟಿ
ಹಂಗಿರದ ಬೆಟ್ಟ ಮತ್ತಲ್ಲಿ
ಹರಿವ ಅಘನಾಶಿನಿ ಮಾತ್ರ
ಈಗ ಜೀವಂತ ಸಾಕ್ಷಿ
ವರವಾಗಿ ಸುರಿದುಬಿಡು
ಇಲ್ಲೇ ಆಚೀಚೆಯ
ಮಣ್ಣ ಕಣಕಣದ ಗಂಧ ಸೇಚುವಂತೆ
ಇರು ಒಂದೆರಡು ನಿಮಿಷ
ಉಳಿದರ್ಧ ಕಪ್ಪು ಚಹಾ ಹೀರಿ
ಈ ಮಾಡಿನಿಂದಾಚೆ ನಾನೂ ಬರುವೆ
ಬೀಸದ ನಿರ್ಜೀವ ಗಾಳಿ
ಪಂಜಿಯಲಿ ಮೊಳಕೆಯೊಡೆಯಲಿ
ಕವಿತೆಯಾದರೂ ಒಂದು
ಜತನವಾಗಿ, ಪತನವಾಗಿ,
ಇಲ್ಲ ಅನಾಥವಾಗಿ
–ರಾಘವೇಂದ್ರ ಹೆಗಡೆ
ಒಂದು, ಎರಡು……
ಇಡಿಯ ಪುಟದಿ ಖಾಲಿ ಪದ
ಬಣ್ಣ ನೀನೆ ಅಕ್ಷರ,
ಜಗದಲೆಲ್ಲಿ ಒಂದೆ ಹದ
ಎಲ್ಲ ತಾನೆ ನಶ್ವರ..?!
***
ಹೂವ ಹಂಗು ಯಾಕೆ ಬೇಕು
ನೋವು ನುಂಗಿ ಹಾಡಲು?
ಹೊಳೆಯ ಹೊದಿಕೆ ಮಾತ್ರ ಸಾಕು
ನೆರಳಿಗೆ ನಿರಾಳದಿ ಮೈಚಾಚಲು.!
***
ತೆರೆದ ತೀರದ ಗುಡಿಯ
ಹೊನ್ನ ಬಾನ್ಮುಡಿ ಕವಿತೆ
ಹೊಸಿಲ ಕಿಟಕಿ ರಂಗವಲ್ಲಿಯ
ಗಂಧಗಂಧದಲಿರಲಿ ನಿನ್ನ ಸ್ಮಿತೆ..
***
— ರಾಘವೆಂದ್ರ ಹೆಗಡೆ
******
* ‘ರಾ ಗ ನೌ ಕೆ’ ಯಾನ ಶುರುವಾಗಿ ಇಂದಿಗೆ ಎರಡು ಸಂವತ್ಸರಗಳು ಕಳೆದಿವೆ. ನನ್ನ ಬರಹಗಳಿಗೆ ಪ್ರೋತ್ಸಾಹ ನೀಡಿದ ಸರ್ವರಿಗೂ ಕೃತಜ್ಞತೆಗಳು. 🙂
* ಇದನ್ನೂ ಓದಿ: ಮೋಡದ ಮೇಲೊಂದು ವರ್ಷದ ನಡಿಗೆ..
* ಮೇಲಿನ ಚಿತ್ರಗಳ ಅಡಿಬರಹಕ್ಕೆ ಬಳಸಿಕೊಂಡಿರುವ ಸಾಲುಗಳು ಮತ್ತು ಚಿತ್ರಸ್ಥಳ :
(೧) ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., : ಕೆ. ಎಸ್. ನರಸಿಂಹ ಸ್ವಾಮಿ
ಚಿತ್ರ: ಕುಮಟಾ – ಮೂರೂರು ಮಾರ್ಗದಲ್ಲಿ
(೨) ಕೊಡುವುದೇನು ಕೊಂಬುದೇನು.. : ಗೌರೀಶ್ ಕಾಯ್ಕಿಣಿ
ಚಿತ್ರ: ನನ್ನ ಹುಟ್ಟೂರು ಕತಗಾಲ ಸನಿಹ ಹರಿವ ಅಘನಾಶಿನಿ ನದಿ
(೩) ಉದಯಾಸ್ತಗಳಲಿ.. : ಕೆ. ಎಸ್. ನಿಸಾರ್ ಅಹಮದ್
ಚಿತ್ರ: ಸುರತ್ಕಲ್ ಸನಿಹ ಸೆರೆಯಾದ ಸೂರ್ಯಾಸ್ತ
******
— ರಾಘವೇಂದ್ರ ಹೆಗಡೆ.