Monthly Archives: ಆಗಷ್ಟ್ 2011
ಮತ್ತೊಂದು ರಸ್ತೆ
ನಿರ್ಭೀತ ಹೊರಟ ದಾರಿಗೆ
ವರ್ತುಲ ಸವಾಲು
ಹೇಗೆ ಹೋಗಬೇಕು, ಹೇಗೆ ಹೋಗಬೇಕು
ಅಲೆಗೆ ಸಿಕ್ಕಿ ಬದಿಗೊತ್ತಿ
ಇಂಚಿಂಚು ಸರಿದ ಮರಳ
ರಾಶಿಯೇ ಒಂದುಕಡೆ
ಅಡಿಯ ಪಡಿಯಚ್ಚು ಪಡೆದು
ದಿಬ್ಬದಿಬ್ಬಗಳಾಗಿ ನಿಂತು
ಯಾನಶಬ್ಧ ನಿಶ್ಯಬ್ಧತೀರ.
ಹನಿ ಮೈಮೇಲೆ ಬಿದ್ದಾಗ
ಶಿಥಿಲ ಮಾಡಿನ ಬಗ್ಗೆ ಅನುಕಂಪ
ವರ್ತುಲ ಸುರುಳಿ ಬಿಡಿಸುವಲ್ಲೂ
ಗೋಳಾರ್ಧ ಖಂಡಾರ್ಧ ನೆಪ
ಊರೂರು ಸುತ್ತಿ ಉಸಿರು
ಸೇರುವ ಗಾಳಿಗೆ ಬದುಕು
ವಿಪರೀತ ಸಖ್ಯ; ಅದೇ ಕನಸು.
ಶೂನ್ಯದಿಂದಾರಂಭವಾಗುವುದು
ಎಲ್ಲ ಯಾಕೆ ಅದಕೆ
ಹಾಕುವುದು ನಿರ್ಲಿಪ್ತ ಹೊದಿಕೆ
ಮೇರು, ಪರ್ವ, ಉತ್ತುಂಗ
ಮುಂತಾದ ಗರ್ವ ಹೆಮ್ಮೆ ಪದಗಳ
ಬುನಾದಿ ತುಂಬೆಲ್ಲ
ರಾಶಿರಾಶಿ ಶೂನ್ಯಗಳು.
ಯಾಕೆ ಅಲೆ ಯಾಕೆ ಮಣ್ಣು
ಪದರಪದರಗಳಾಗಿ ತೆರೆದುಕೊಳ್ಳುವ ಕಣ್ಣು
ಅರಸುತ್ತದೆ ವರ್ತುಲದಲ್ಲಿ ಸಂಭಾವ್ಯ
ಪ್ರಶ್ನೆಗೆ ಸಾಂದರ್ಭಿಕ ಉತ್ತರ
ಮತ್ತೆ ಹೊರಟಿದ್ದು ಹಾದಿಯೇ
ಅಲ್ಲ ಅಂದುಕೊಂಡರೆ ದುಸ್ತರ.
ಅಕೋ ಅಲ್ಲಿ ತೋರುತಿದೆ ಒಂದು ಸಂಧಿ
ನಿರ್ಭೀತಿ ಒಳಗೊಳಗೇ ಕೊಂಚ ಬಂಧಿ
ಮತ್ತೆ ಹೇಗೆ ಹೋಗಬೇಕು ಪ್ರಶ್ನೆಯೆದುರು
ದಿಟ್ಟ ಉತ್ತರದಂತೆ ಸುಳಿವ ಶೂನ್ಯ ವರ್ತುಲಗಳು
ಈಗ ಹೊರಡುವುದು ಬಹುಶಃ
ಅರ್ಥವಾಗದ ಅಲ್ಲಿಗೇ ಇರಬಹುದು.
— ರಾಘವೇಂದ್ರ ಹೆಗಡೆ