ಬ್ಲಾಗ್ ಸಂಗ್ರಹಗಳು

ಬಿಂಬ


ವರಾತ ತೆಗೆದ ಮಣ್ಣಿಗೆ ಹರಳಹುಚ್ಚು
ಗಾಳಿ ತೂರಿದ್ದು ಎಲೆಯಿರಬೇಕು
ಅಂದುಕೊಂಡದ್ದು ಕೊಂಚ ಹೆಚ್ಚು

ಊರಾಚೆಯ ತೊರೆ ಕಣ್ಣು ಕುಕ್ಕುವಾಗ
ನೆತ್ತಿ ಸುಡುವ ನಡು ಮಧ್ಯಾನ್ನ್ಹ
ಹನಿ ಹೊತ್ತ ಹೆಸರಲಿ
ಅಲೆಯಬೇಕೆಂದು ಬಿಟ್ಟು ಉದ್ಯಾನ
ಮನಸು ಉರಿವ ಕರ್ಪೂರ
ಹೊತ್ತು ತೇಲುವ ಕೆಸುವಿನೆಲೆ
ಅಕೋ ಆ ತೀರದಿ ತೀರದ ಹೊಸನೆಲೆ?

ಕನ್ನಡಿಯಲ್ಲಿ ಕಂಡ ಮುಖ
ಮುಖವೇ ಹೌದಾ..,? ಅನುಮಾನ
ಮುಖದ ಮೇಲಲ್ಲ ಕನ್ನಡಿಯ ಮೇಲೆ
ಇಟ್ಟರೂ ಮತ್ತೆ ಮತ್ತೆ
ಉಸಿರ ಬೆರಳಚ್ಚು
ಅರೆ ಯಾಕೋ ಬೇರೆಯದೇ
ಕಾಣುವುದಲ್ಲ ಬರೆವ ನೆರಳಚ್ಚು

ಕಾಮನಬಿಲ್ಲು ನೋಡಿದ ಕಣ್ಣು
ನೀರಿಗಿಣುಕಿ ಬಿಂಬಕೆ ಮುಖವೊಡ್ಡಿದರೆ
ಅಲ್ಲಿ ಕಂಡದ್ದು ಮೋಡದಡಿ
ಪದರಪದರವಾಗಿ ಚಡಪಡಿಸುತಿರುವ ಹಗಲು.

******

ಕೊ: ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

******

— ರಾಘವೇಂದ್ರ ಹೆಗಡೆ

ಮತ್ತೊಂದು ರಸ್ತೆ


ನಿರ್ಭೀತ ಹೊರಟ ದಾರಿಗೆ
ವರ್ತುಲ ಸವಾಲು
ಹೇಗೆ ಹೋಗಬೇಕು, ಹೇಗೆ ಹೋಗಬೇಕು

ಅಲೆಗೆ ಸಿಕ್ಕಿ ಬದಿಗೊತ್ತಿ
ಇಂಚಿಂಚು ಸರಿದ ಮರಳ
ರಾಶಿಯೇ ಒಂದುಕಡೆ
ಅಡಿಯ ಪಡಿಯಚ್ಚು ಪಡೆದು
ದಿಬ್ಬದಿಬ್ಬಗಳಾಗಿ ನಿಂತು
ಯಾನಶಬ್ಧ ನಿಶ್ಯಬ್ಧತೀರ.

ಹನಿ ಮೈಮೇಲೆ ಬಿದ್ದಾಗ
ಶಿಥಿಲ ಮಾಡಿನ ಬಗ್ಗೆ ಅನುಕಂಪ
ವರ್ತುಲ ಸುರುಳಿ ಬಿಡಿಸುವಲ್ಲೂ
ಗೋಳಾರ್ಧ ಖಂಡಾರ್ಧ ನೆಪ
ಊರೂರು ಸುತ್ತಿ ಉಸಿರು
ಸೇರುವ ಗಾಳಿಗೆ ಬದುಕು
ವಿಪರೀತ ಸಖ್ಯ; ಅದೇ ಕನಸು.

ಶೂನ್ಯದಿಂದಾರಂಭವಾಗುವುದು
ಎಲ್ಲ ಯಾಕೆ ಅದಕೆ
ಹಾಕುವುದು ನಿರ್ಲಿಪ್ತ ಹೊದಿಕೆ
ಮೇರು, ಪರ್ವ, ಉತ್ತುಂಗ
ಮುಂತಾದ ಗರ್ವ ಹೆಮ್ಮೆ ಪದಗಳ
ಬುನಾದಿ ತುಂಬೆಲ್ಲ
ರಾಶಿರಾಶಿ ಶೂನ್ಯಗಳು.

ಯಾಕೆ ಅಲೆ ಯಾಕೆ ಮಣ್ಣು
ಪದರಪದರಗಳಾಗಿ ತೆರೆದುಕೊಳ್ಳುವ ಕಣ್ಣು
ಅರಸುತ್ತದೆ ವರ್ತುಲದಲ್ಲಿ ಸಂಭಾವ್ಯ
ಪ್ರಶ್ನೆಗೆ ಸಾಂದರ್ಭಿಕ ಉತ್ತರ
ಮತ್ತೆ ಹೊರಟಿದ್ದು ಹಾದಿಯೇ
ಅಲ್ಲ ಅಂದುಕೊಂಡರೆ ದುಸ್ತರ.

ಅಕೋ ಅಲ್ಲಿ ತೋರುತಿದೆ ಒಂದು ಸಂಧಿ
ನಿರ್ಭೀತಿ ಒಳಗೊಳಗೇ ಕೊಂಚ ಬಂಧಿ
ಮತ್ತೆ ಹೇಗೆ ಹೋಗಬೇಕು ಪ್ರಶ್ನೆಯೆದುರು
ದಿಟ್ಟ ಉತ್ತರದಂತೆ ಸುಳಿವ ಶೂನ್ಯ ವರ್ತುಲಗಳು
ಈಗ ಹೊರಡುವುದು ಬಹುಶಃ
ಅರ್ಥವಾಗದ ಅಲ್ಲಿಗೇ ಇರಬಹುದು.

— ರಾಘವೇಂದ್ರ ಹೆಗಡೆ