ಬ್ಲಾಗ್ ಸಂಗ್ರಹಗಳು

ಸರಗೋಲು


ಕಡಲು ಕಾಣದೇ ಉಳಿದೀತು
ಅಲೆ ಸೋತರೆ
ಯಾವ ಬಾನಿ ಮತ್ತೆ ಜಗಕೆ
ಬಣ್ಣ ಕಟ್ಟೀತು ಮುಗಿಲು
ನೀ ತುಸು ನಕ್ಕರೆ
ಹೆಗಲುಗಳು ಯಾಕೆ
ವ್ಯಕ್ತ ಯುಗಕೆ

ಈಜುವುದು ಮೋಡ
ಬಾನಾಡಿಗಳ ಹಾವಳಿಯಲ್ಲಿ
ಮೀಯುವುದು ಮುಸಲಧರೆ
ಹಸಿಬೆಳಕ ಚಾವಡಿಯಲ್ಲಿ
ತೀರದ ದಾಹದಲಿ
ಹರಿವ ನಾಗಾಲೋಟದಲಿ
ಇರುಳಿನಲಿ ನಸುಕಿನಲಿ
ಒಲೆಯಡಿಯ ಕೆಂಡದಲಿ
ಉಗಿಯ ಹಾಸುವ ಉಸಿರು
ಎಲೆ ಮೊಗ್ಗುಗಳ
ಕಿಡಿ-ಕುಡಿಬಸಿರು

ಹಾಯ್ವ ಹಾದಿಯ ತೆರೆದು
ಕಾಯ್ವ ಕಥನವ ಬರೆದು
ಕಾಲ ಬರಮಾಡುವ
ದೀವಟಿಗೆ ನೀನು
ಸುಳಿಯ ಸಂಚಿಯಲವಿತು
ಹಿಂದೆ-ಮುಂದಕೆ
ಈಜ ಭೃಮಿಸುತಲಿ
ನಡೆವ ಧೂಳು ನಾನು?
—————

— ರಾಘವೇಂದ್ರ ಹೆಗಡೆ