ಸಂಕ್ಷೇಪ
ತೆರೆಯ ವಿಶಾಲ ಚಿರಂತಗಳಲಿ
ಮಡಚಿ ಹರವಿಟ್ಟ ದಾರ
ಮೌನ ಘೋರಿ ಕಂದರಗಳಲಿ
ಕಣ್ಬಿಂಬದಂತರವೋ ಅಪಾರ
ನಿಜ, ಪೇಲವ ಬಣ್ಣದಲಿ
ಸಂಜ್ಞೆ ಆಯಾತ ನಿರ್ಯಾತವೆಷ್ಟು
ಲೆಕ್ಕ ಇಟ್ಟವರಾರು ನೀ ಹೇಳು
ಅಕಸ್ಮಾತು ಇಟ್ಟಿದ್ದರೆ ಪ್ರತಿಯೊಂದು
ಕಾಣುತ್ತಿತ್ತೇನೋ ಚೆಂದ ದುಪ್ಪಟ್ಟು
ತೆರೆದ ಬಯಲ ಕಿಟಕಿ
ಯ ಸೆಲೆದಾಟಿ ಗುಟುಕಿ
ತಾಪಡ್ತೋಪು ಬಂದ ಊರಿಗೇನು ಗೊತ್ತು
ಕಳಿಸಿದ ಕಡ ನೀ
ಮಣಗಟ್ಟಲೆ ಬರಮಾಡಿದ ಹೊತ್ತು
ಚೌಕ, ವೃತ್ತ, ಸಿಗ್ನಲ್ಲುಗಳ
ಸ್ಟಾಪುಗಳಲ್ಲಿ ನಿಂತಂತೆ
ತಡಿಯಲ್ಲಿ ಮೈಚೆಲ್ಲಿ ತೇಲಿ
ಹೋಗಲು ಬಿಕ್ಕಿ ಹರಡಿಬಿದ್ದ
ದಾಸಾಳದ ಎಸಳಂತೆ,
ಹೈವೆಯಲ್ಲಿ ಮಧ್ಯಾಹ್ನ
ಸುಳ್ಳುಸುಳ್ಳೇ ಕಾಣುವ
ನೀರಪ್ರತಿಮೆಯಂತೆ
ಕಂತೆಕಂತೆ ಅಂತೆಗಳಲಿ
ಸಿಕ್ಕಿಬಿಡಬಹುದು ನಾನು
ಮುದ್ದಾಂ ಮುಖ ತಿರುಗಿಸಿ
ಹೋಗಲು ನೀ ಅಣಿಯಾಗು..
******
– ರಾಘವೇಂದ್ರ ಹೆಗಡೆ
‘ಅನಾವರಣ’ವಾದ ಕವಿತೆ
ಹಳ್ಳಿಯಲ್ಲಿ ಜಮೀನು ನೋಡಿಕೊಂಡಿರುವ ವೃದ್ದ ದಂಪತಿ, ಉದ್ಯೋಗ ನಿಮಿತ್ತ ನಗರಸೇರಿ ಬೇರೂರಿದ ಅವರ ನಾಲ್ವರು ಮಕ್ಕಳು ಮತ್ತವರ ಕುಟುಂಬ,ಅದರಲ್ಲೊಂದಷ್ಟು ಜನ ಮಾನವೀಯ ಸಂಬಂಧಗಳ ಮೌಲ್ಯ ಅರಿತವರಾದರೆ ಮತ್ತಷ್ಟು ಜನ ಭಾವನೆಗಳನ್ನೆಲ್ಲ ಮಾರಿ ಹಣಗೋಚುವ ಚಾಳಿಯವರು.., ಇಂತಹ ಪಾತ್ರಗಳು ಇಲ್ಲಿನ ಕಥಾಸೂತ್ರಗಳು. ಅಂದಹಾಗೆ ಈಗ ಹೇಳಹೊರಟಿರುವುದು ಈ ಟಿವಿ ಕನ್ನಡದಲ್ಲಿ ಪ್ರಸಾರಗೊಂಡ ‘ಅನಾವರಣ’ದ ಕುರಿತು.
ಅಪ್ಪ ಮಕ್ಕಳ ಸಂಬಂಧ, ಪ್ರಚಲಿತ ಸ್ಥಿತಿಗತಿ, ವ್ಯವಸಾಯಕ್ಕೆ ಕೂಲಿಗಳ ಅಭಾವ, ಲಂಚಗುಳಿತನ, ಹಣ ಎಂಬ ಹುಚ್ಚು, ವ್ಯವಹಾರವೇ ಮುಖ್ಯವಾಗಿ ಹೆತ್ತವರನ್ನು ಮತ್ತು ತಾವು ಹೆತ್ತ ಮಕ್ಕಳನ್ನು ಉಪೇಕ್ಷಿಸುವ ಜನ, ಬೇಜವಾಬ್ದಾರಿ ಪರಮಸ್ವಾರ್ಥಿ ಅಪ್ಪ ಮತ್ತು ಗಂಡನ ಮಧ್ಯೆ ಹೈರಾಣಾಗುವ ಹುಡುಗಿ, ಮಣ್ಣಿನ ಮೋಹಕ್ಕೆ ಮನಸೋತು ವಿದೇಶದಿಂದ ಹಳ್ಳಿಗೆ ಬರುವ ದಂಪತಿ.. ಇಂತಹ ಪಾತ್ರಗಳ ಮೂಲಕ ಇಲ್ಲಿ ಪ್ರಪಂಚ ತೆರೆದುಕೊಳ್ಳುತ್ತದೆ.
ಹಾಗೆ ನೋಡಿದರೆ ಇಲ್ಲಿ ಕಥಾವಸ್ತುವೇ ಕಥೆ ಮತ್ತು ಕಥಾನಾಯಕ.
ಅಪ್ಪ ಅಮ್ಮನ ಮಾತನ್ನು ಅಲಕ್ಷಿಸಿ, ಮದುವೆಯಾಗುತ್ತೇನೆಂದು ನಂಬಿಸಿದವನ ಹಿಂದೆ ಹೊರಟು ಮಗುವನ್ನೂ ಪಡೆದು ಕಡೆಗೆ ಆತನಿಂದಲೇ ಉಪೇಕ್ಷೆಗೊಳಗಾಗಿ ಇತ್ತ ತವರಿನಿಂದಲೂ ಧಿಕ್ಕರಿಸಲ್ಪಡುವ ಮಹಿಳೆ(ಶೃತಿ) ಹಾಗೂ ತನ್ನತನ, ಸ್ವಾಭಿಮಾನ ಇಂತಹ ಪದಗಳ ಪರಿಚಯವೇ ಇರದ ತೀರ ಬೇಜವಾಬ್ದಾರಿ, ವ್ಯಸನಿ ಮತ್ತು ಅಹಂಕಾರಿ ಪುರುಷನೊಬ್ಬನ ಪತ್ನಿ (ಮಾನಸ) ಪಾತ್ರಗಳು ಕಥಾಹಂದರದಲ್ಲಿ ಪುರುಷ ಪ್ರಧಾನ ವ್ಯವಸ್ತೆಯ ಸಮಾಜ ಉಂಟುಮಾಡಬಹುದಾದ ರೇಜಿಗೆ ಬಗೆಗೆ ಹೆಣ್ಣಿನ ವೇದನೆ ಸಂವೇದನೆಗಳ ಮೌನ ಮಾತಾಗುತ್ತವೆ.
ಎಷ್ಟೋವರ್ಷಗಳ ನಂತರ ವಿದೇಶದಿಂದ ಹುಟ್ಟೂರಿಗೆ ಬರುವ ದಂಪತಿ, ಸಂಬಂಧದ ನೆಪಹೇಳಿ ಬಂದವರಿಗೆಲ್ಲ ಕೊಡುಗೈ ದಾನಿಗಳಾಗಿ ಕಡೆಗೆ ಮೋಸಹೋಗಿ ಎಲ್ಲ ಕಳೆದುಕೊಂಡು ಮತ್ತೆ ಹಿಂದೆ ತಾವಿದ್ದಲ್ಲಿಗೇ ವಾಪಸಾಗುತ್ತಾರೆ. ಒದ್ದೆ ಭೂಮಿಯನ್ನು ಅಗೆವವರು ಜಾಸ್ತಿ. ಅಲ್ಲಿಗೆ ಹಣವಿದ್ದಾಗ ಎಲ್ಲ ಬಂಧುಗಳು ಇಲ್ಲದಿದ್ದಾಗ ಯಾರೂ ಇಲ್ಲ ಎಂಬ ಕಟುವಾಸ್ತವ ಪ್ರಪಂಚದ ಅನಾವರಣಪ್ರಯತ್ನವೂ ನಡೆಯುತ್ತದೆ.
ತಂದೆಯ ಬ್ರಷ್ಟಾಚಾರ, ಲಂಚಗುಳಿತನವನ್ನು ಧಿಕ್ಕರಿಸಿ ಮಗಳು ಮನೆಬಿಟ್ಟು ಹಳ್ಳಿಯ ತಾತನ ಮನೆ ಸೇರುತ್ತಾಳೆ. ಇತ್ತ ಇನ್ನೊಬ್ಬಳು ಸದಾ ವ್ಯವಹಾರಲೋಕದಲ್ಲೇ ಮುಳುಗಿರುವ ತನ್ನ ತಾಯಿಯನ್ನು ಧಿಕ್ಕರಿಸಿ ತಾತನ ಮನೆಗೆ ನಡೆಯುತ್ತಾಳೆ.
ಹಣಬಾಕ ಮಗನ ನಡವಳಿಕೆ ಬಗ್ಗೆ ತೀವ್ರ ಮನನೊಂದ ವೃದ್ದ ತಾಯಿ ಮಗಳ ಬಳಿ ಉಸುರುತ್ತಾಳೆ – “ಹೊಟ್ಟೆಯಲ್ಲಿದ್ದಾಗ್ಲೇ ತೀವ್ರ ಸಂಕಟ ಕೊಡ್ತಿದ್ದ, ಈಗ್ಲೂ ಬಿಟ್ಟಿಲ್ಲ ನೋಡು..”
ಮತ್ತೊಮ್ಮೆ ತಾತ್ಸಾರಗೊಂಡು ತನ್ನ ಗಂಡನ ಕುರಿತು ಹೇಳುತ್ತಾಳೆ –“ ಹಣ್ಣು ಬೆಳೀತಾ ಇತ್ತು, ಹಣದ ಮೋಹ ಹೊಗೆಸೊಪ್ಪು ನೆಟ್ಟ ಈ ವ್ಯಕ್ತಿ”.
ಅಲ್ಲಲ್ಲಿ ಸಂಭಾಷಣೆ ತೀವ್ರ ತೀಕ್ಷ್ಣ. ಅನಗತ್ಯ ಮಾತಿಲ್ಲ. ಹೆಚ್ಚಿನ ಭಾವಗಳಿಗೆ ಮೌನವೇ ಧ್ವನಿ. ಹಾಗಾಗಿ ಮೌನ ಇಲ್ಲಿ ಸಂಭಾಷಣೆಯ ಒಂದು ಭಾಗವೆ. ಹಿಂದೆ ‘ಮಂಥನ’ದ ಮೂಲಕ ಸಂಭಾಷಣೆಗಳು ಹೀಗೂ ಇರಬಹುದು ಎಂದು ತೋರಿಸಿದ್ದ ಎಂ. ಎನ್. ಸೇತುರಾಮ್ ಅದೇ ಪರಂಪರೆಯನ್ನು ಇಲ್ಲೂ ಮುಂದುವರಿಸಿದ್ದಾರೆ. ಆಡುಮಾತಿಗಿಂತ ಕೊಂಚ ಭಿನ್ನ ನಿರೂಪಣಾಶೈಲಿಯಿಂದ ಧಾರಾವಾಹಿ ಸಾಹಿತ್ಯಿಕವಾಗಿ ಗುಣಾತ್ಮಕವಾಗುತ್ತದೆ.
ಹಳ್ಳಿಯ ಜೀವನ ಸಾಕೆಂದು ವೃದ್ದ ಪತಿಯನ್ನು ಬಿಟ್ಟು ನಗರದಲ್ಲಿರುವ ಹಿರಿಯ ಮಗನ ಮನೆ ಸೇರಿಕೊಳ್ಳುವ ಮಹಿಳೆ ಮತ್ತು ತಾ ಬೆಳೆಸಿದ ತೋಟ ಬಿಡುವ ಮನಸ್ಸಾಗದೆ ಹಳ್ಳಿಯಲ್ಲೇ ಉಳಿವ ಆಕೆಯ ಪತಿ ಅಲ್ಲಲ್ಲಿ ಕಥೆಯ ನೊಗ ಹಿಡಿದವರಂತೆ ಕಾಣುತ್ತಾರೆ.
ತನ್ನ ಮಗನ ಬೇಜವಾಬ್ದಾರಿತನ ಮತ್ತು ಉಢಾಪೆಯಿಂದ ಸೊಸೆ ಮಾನಸಳ ಜೀವನ ಹಾಳಾದುದಕ್ಕೆ ಮರುಗಿ, ನೈತಿಕ ಹೊಣೆ ಹೊತ್ತು “ಮಗಳೇ ನಿನಗೆ ಯಾವಾಗ ಕಷ್ಟವಾದರೂ ಕರೆ, ನಾ ನಿನ್ನ ಜೊತೆಗಿದ್ದೇನೆ” ಎಂದು ಆಕೆಗೆ ಹಿಂದೆ ನೀಡಿದ್ದ ಆಶ್ವಾಸನೆಯಂತೆ ಕಡೆಗೆ ವೃದ್ದ ಮಾವ ನಗರದಲ್ಲಿರುವ ಸೊಸೆಯ ಮನೆಗೆ ಬರುತ್ತಾನೆ. ಮಾವನ ಬಗೆಗೆ ಮರುಕಪಟ್ಟು ಮಾನಸ ಹೇಳುತ್ತಾಳೆ – “ನನ್ನಿಂದ ನೀವು ಹಳ್ಳಿ ಬಿಡುವಂತಾಯಿತು”.
“ಮಗಳೇ ಅದು ನಿರರ್ಥಕ, ಇದು ಸಾರ್ಥಕ”.
“ನಗರದ ಬದುಕಿಗೆ ನಿಮಗೆ ಹೊಂದಿಕೆ ಕಷ್ಟವಾಗಬಹುದು”
“ಮನುಷ್ಯ ಯಾವಾಗ ಹೊಂದಿಕೊಂಡು ಬದುಕಿದ್ದ ಹೇಳು, ಧಿಕ್ಕರಿಸಿಯೇ ಬದುಕಿದ್ದು. ಹೊಂದಾಣಿಕೆ ಬರೀ ನಟನೆ” ಎಂಬ ಆತನ ತೂಕದ ಮಾತು ನೈಜ ಪ್ರಪಂಚವನ್ನು ಅನಾವರಣಗೊಳ್ಳುತ್ತದೆ.
ಅತ್ತ ವೃದ್ದ ತಾಯಿ ಗಂಡುಮಕ್ಕಳ ವರ್ತನೆಯಂದ ಜಿಗುಪ್ಸೆಗೊಂಡು “ಸಹಿಸುವುದು ಮಾತ್ರವಲ್ಲ ತಿದ್ದುವುದೂ ತಾಯಿ” ಎಂದು ತಾನೆ ಹಿಂದೆ ಧಿಕ್ಕರಿಸಿದ್ದ ಮಗಳ(ಶೃತಿ) ಮನೆ ಸೇರುತ್ತಾಳೆ.
ತನಗೆ ಮತ್ತೊಂದು ಕೆಲಸ ಸಿಕ್ಕಿತು ಎಂದು ಸಂತಸದಿಂದ ಮಾವನ ಬಳಿ ಹೇಳುವ ಮಾನಸ, ಜೀವನದಲ್ಲಿ ಸಾಕಷ್ಟು ವೇದನೆಗಳನ್ನು ಅನುಭವಿಸಿದ್ದಕ್ಕೆ ಪ್ರತಿಕ್ರಿಯೆಯೆಂಬಂತೆ ಪ್ರಪಂಚವನ್ನು ಕುರಿತು – “ನೀವೆಲ್ಲ ಎಷ್ಟೇ ಅಡೆ ತಡೆ ಒಡ್ಡಿದರೂ ನಾನು ಬದುಕಿ ತೋರಿಸ್ತೇನೆ” ಎಂದು ಉಸುರುತ್ತ ವಿಶ್ವಾಸದ ಅಲೆಯಾಗುತ್ತಾಳೆ. ಅವಳ ಉದ್ಗಾರ ಕತ್ತಲಲ್ಲಿ ಪ್ರತಿಧ್ವನಿಯಾಗುತ್ತದೆ.
ಅದಕ್ಕೆ ಮಾವ “ನೀನ್ ಹೇಳಿದ್ದು ಯಾರಿಗೂ ಕೇಳ್ಸೆ ಇಲ್ಲ” ಎಂದು ವ್ಯಂಗ್ಯ ನಗೆ ಬೀರುತ್ತಾನೆ.
ಹಿಂದೆಲ್ಲ ಮತ್ತೊಂದು ಮದುವೆಯಾಗು ಹೀಗೆ ಒಂಟಿ ಕೊರಗಬೇಡ ಎಂಬ ಮಾವನ ಸಲಹೆಯನ್ನು ಕಡೆಗಣಿಸಿದ್ದ ಆಕೆ ಈಗ – “ಮಾವ ನನಗೂ ಬದುಕು ಅಂತ ಒಂದು ಇದೆ ಅಲ್ವಾ ?” ಎಂದು ಪ್ರಶ್ನಾರ್ಥಕವಾಗುತ್ತಾಳೆ. ಆತ ನಿರುತ್ತರನಾಗಿ ಕಣ್ಣೆದುರಿಗಿನ ಅನಂತವನ್ನು ನೋಡುತ್ತ ಹೊರಟು ಹೋಗುತ್ತಾನೆ. ಹೀಗೆ ಕಥೆಯ ಕೊನೆಯ ಸಂಭಾಷಣೆಯನ್ನು ಮತ್ತೆ ಮೌನವೇ ಧ್ವನಿಸುತ್ತದೆ.
ಪ್ರಪಂಚದಲ್ಲಿ ಯಾವುದೂ ನಿಖರವಲ್ಲ, ಎಲ್ಲ ಸಾಧ್ಯತೆ ಸಂಭವನೀಯತೆಗಳೆ. ಇದಕ್ಕೆ ಇದೇ ಕೊನೆ ಎಂದು ಎಲ್ಲಿಯೂ ನಾವುನಾವೆ ಚೌಕಟ್ಟು ಹಾಕಿಕೊಳ್ಳುವುದು ಅಸಮಂಜಸ. ಬದುಕು ಒಂದು ಹರವು. ಅದರ ಮೂಲ ಮತ್ತು ಕೊನೆಯನ್ನು ಶೋಧಿಸುವುದು ಕಷ್ಟ ಅಥವ ಗ್ರಹಿಸುವುದು ಅಸಂಗತ.
‘ಕಬ್ಬಿನ ಸಿಹಿರಸ ಕಮರಿ ಕಾಕಂಬಿ ಜೊಳ್ಳುತೆನೆ ನಿರ್ಬೀಜ ಹಣ್ಣು’ ಎಂಬ ಶೀರ್ಶಿಕೆ ಗೀತೆಯ ಸಾಲು ಕೂಡ(ಸಾಹಿತ್ಯ: ಬಿ. ಅರ್. ಲಕ್ಷ್ಮಣರಾವ್) ಕಥೆಯ ಅನಾವರಣದ ಒಂದು ಭಾಗವೆ. ಸಂಭಾಷಣೆಯಲ್ಲಿ ಒಗಟಿದೆ. ಹಲವುಬಾರಿ ಒಂದೇ ಪದ ಅಥವಾ ನುಡಿಗಟ್ಟಿನ ಬಳಕೆಯಾದದ್ದೂ ಇದೆ. ಆದರೂ ಮಾತು, ಸನ್ನಿವೇಶಗಳನ್ನು ಮೈಲುಗಟ್ಟಲೆ ಬೆಳೆಸದೆ ಸಾಧ್ಯವಾದಷ್ಟೂ ಚೊಕ್ಕವಾಗಿ ಪ್ರಸ್ತುತಪಡಿಸುತ್ತ ವ್ಯರ್ಥ ಕಾಲಕ್ಷೇಪ ಮಾಡದೆ ಸಾಗಿ ೧೩೯ನೇ ಕಂತಿನಲ್ಲಿ ವಿರಮಿಸುವ ಈ ದೃಶ್ಯಕಾವ್ಯ ಹತ್ತರ ಜೊತೆಗಿನ ಹನ್ನೊಂದಾಗದೆ ಕೊಂಚ ಭಿನ್ನವಾಗಿ ನಿಲ್ಲುತ್ತದೆ.
******
– ರಾಘವೇಂದ್ರ ಹೆಗಡೆ.
ಅನಿವಾರ್ಯ
ಒಂದರ್ಧ ಪುಟ ಬರೆದ ಖಾಲಿ
ಪದಗಳಿಗೆಲ್ಲ ತುಸು ಅವಸರ
ಮತ್ತೊಂದು ಬದಿಗೆ ಹಾಯಲು.
ಹಿಂದೆ ಮುಂದೆ ಎಲ್ಲ ಕಡೆ
ಅಲೆದಲೆದು ಮತ್ತೆ
ಯಾವುದೋ ಅಂಚು ತಲುಪಿ
ರಭಸ ಆಯುವ ತೆರೆ
ನುಸುಳಿ ಹೆಜ್ಜೆಗುರುತ ಹೊರೆ
ದಾಟಿ ಅಳಿಸಿದಾಗ ಹಟ
ಒಮ್ಮೆ ಜ್ವಲಂತವಾಗುವುದು
ಅನಿವಾರ್ಯತೆಯ ಪ್ರಶ್ನೆ ದಿಟ.
ಮೊನ್ನೆಯದರಂತೆ ನಿನ್ನೆ
ಅದರಂತೆ ಇಂದು- ನಾಳೆ
ಜೊತೆಗೊಂದಷ್ಟು ಅಪೇಕ್ಷೆ
ನಿರೀಕ್ಷೆ ಆಕಾಂಕ್ಷೆಗಳು
ಬುತ್ತಿ ಕಟ್ಟಿ ಬುಗುರಿ
ತೋರಿಸುತ್ತದೆ ದಾರ
ಅದಕೋ ಮೋಹ
ಬದುಕ ಮೇಲೆ ಅಪಾರ!
ನೂಲು ಜಗ್ಗದಿದ್ದರೂ
ಹಾರಿಸುತ್ತದೆ ಪಟವ ಗಾಳಿ
ತಡೆಯ ಒಡ್ಡು ಹಾಕಿದರೂ
ಹರವು ಚಿರ ಸಲಿಲ ಗುಪ್ತಗಾಮಿ
ಇಂತದಕ್ಕೆ ಇದೇ ಬೇಕು
ಎಂಬ ಗರಡಿ ಗಡಿ ಸರಪಳಿ
ಕೊಂಡಿಗಳಲಿ
ಮತ್ತದರ ಚಿಲಕಗಳಲಿ
ಸುತ್ತಿಕೊಳ್ಳುತ್ತ ಬಂಧಿಯಾಗುತದೆ
ಅನಿವಾರ್ಯ ಎಂಬ ಅನಿವಾರ್ಯತೆ
****
– ರಾಘವೇಂದ್ರ ಹೆಗಡೆ
ಒಂದು, ಎರಡು……
ಇಡಿಯ ಪುಟದಿ ಖಾಲಿ ಪದ
ಬಣ್ಣ ನೀನೆ ಅಕ್ಷರ,
ಜಗದಲೆಲ್ಲಿ ಒಂದೆ ಹದ
ಎಲ್ಲ ತಾನೆ ನಶ್ವರ..?!
***
ಹೂವ ಹಂಗು ಯಾಕೆ ಬೇಕು
ನೋವು ನುಂಗಿ ಹಾಡಲು?
ಹೊಳೆಯ ಹೊದಿಕೆ ಮಾತ್ರ ಸಾಕು
ನೆರಳಿಗೆ ನಿರಾಳದಿ ಮೈಚಾಚಲು.!
***
ತೆರೆದ ತೀರದ ಗುಡಿಯ
ಹೊನ್ನ ಬಾನ್ಮುಡಿ ಕವಿತೆ
ಹೊಸಿಲ ಕಿಟಕಿ ರಂಗವಲ್ಲಿಯ
ಗಂಧಗಂಧದಲಿರಲಿ ನಿನ್ನ ಸ್ಮಿತೆ..
***
– ರಾಘವೆಂದ್ರ ಹೆಗಡೆ
******
* ‘ರಾ ಗ ನೌ ಕೆ’ ಯಾನ ಶುರುವಾಗಿ ಇಂದಿಗೆ ಎರಡು ಸಂವತ್ಸರಗಳು ಕಳೆದಿವೆ. ನನ್ನ ಬರಹಗಳಿಗೆ ಪ್ರೋತ್ಸಾಹ ನೀಡಿದ ಸರ್ವರಿಗೂ ಕೃತಜ್ಞತೆಗಳು.
* ಇದನ್ನೂ ಓದಿ: ಮೋಡದ ಮೇಲೊಂದು ವರ್ಷದ ನಡಿಗೆ..
* ಮೇಲಿನ ಚಿತ್ರಗಳ ಅಡಿಬರಹಕ್ಕೆ ಬಳಸಿಕೊಂಡಿರುವ ಸಾಲುಗಳು ಮತ್ತು ಚಿತ್ರಸ್ಥಳ :
(೧) ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., : ಕೆ. ಎಸ್. ನರಸಿಂಹ ಸ್ವಾಮಿ
ಚಿತ್ರ: ಕುಮಟಾ – ಮೂರೂರು ಮಾರ್ಗದಲ್ಲಿ
(೨) ಕೊಡುವುದೇನು ಕೊಂಬುದೇನು.. : ಗೌರೀಶ್ ಕಾಯ್ಕಿಣಿ
ಚಿತ್ರ: ನನ್ನ ಹುಟ್ಟೂರು ಕತಗಾಲ ಸನಿಹ ಹರಿವ ಅಘನಾಶಿನಿ ನದಿ
(೩) ಉದಯಾಸ್ತಗಳಲಿ.. : ಕೆ. ಎಸ್. ನಿಸಾರ್ ಅಹಮದ್
ಚಿತ್ರ: ಸುರತ್ಕಲ್ ಸನಿಹ ಸೆರೆಯಾದ ಸೂರ್ಯಾಸ್ತ
******
– ರಾಘವೇಂದ್ರ ಹೆಗಡೆ.
ಒಂದಷ್ಟು ಹೈಕುಗಳು .!
ಹಾದಿ
ಗೆ ಎರಡು ಬದಿ
ಒಂದು ಮರಳದ ನಿನ್ನೆ, ಮತ್ತೊಂದು ಮರುಕಳಿಸುವ ನಾಳೆ!
***
ತಡೆಯ
ಲಾಗದಷ್ಟು ಸೆಳೆತ ಸುಳಿಯ
ದೇ ಹೋದರೂ ತೆರೆ ತಡಿಯಸನಿಹ!
***
ಜೊತೆಗೇ ಹರಿದು
ಬಿಡುವಾ ಎಂದು
ಬಂದ ಕವಿತೆ ಈಗ ಶಬ್ಧಬಂಧಿ!
***
ದಡದಿ ನೆಗೆ
ದು ಹಿಮ್ಮುಖ ಹೊರಟೇ ಕವಿತೆಗೆ
ಅಲೆಸೆಳೆವ ಕಾಂತಶಕ್ತಿ!
***
ಬೆಟ್ಟ-ಬಯಲ
ಗುಂಗಲ್ಲೇ ಹರಿದ ಹೊಳೆಸಾಲ
ಭರತವೇರಿದ್ದು ತೀರ ಸಹಜ ಬಿಡಿ!
***
– ರಾಘವೇಂದ್ರ ಹೆಗಡೆ
ಕನ್ನಡಿ ರೆಕ್ಕೆ
ಯಾರೋ ಹಚ್ಚಿ ಹೋದ ಕಿಡಿಗೆ
ಸುಟ್ಟ ಮಣ್ಣ ಬದಿಬದಿಯೆಲ್ಲ
ಹಾದಿಯೆಂದು ಹೊರಟು
ನಿಟ್ಟುಸಿರಿಟ್ಟು ಕೊಂಚ
ದೂರದಿ ಕಾಯುತಿದೆ ಹಣತೆ
ಆಹ್ವಾನಿಸುತ ಎಂಬಂತೆ
ಆವಾಹನೆಯಾದ ಸ್ಥರಗಳಿಗೆಲ್ಲ
ಭರತ ಇಳಿತಗಳು
ಇಲ್ಲಿ
ಉಸಿರಾಟದ ಪರಿಕರಗಳು.
ಕಂಡದ್ದು ಹಣತೆಯಲ್ಲ
ಹಣತೆಯೆಂಬ ಭ್ರಮೆ
ತೆರೆಗಳ ನಡುವೆ ಬಿದ್ದು
ಹಿಂದೆ ಮುಂದೆ ಹೊಯ್ದಾಡುವ
ಕವಿತೆಯ ಶಮೆ
ಕತ್ತುರಿದು ಬಿದ್ದ ಕಿಡಿ
ಊರಲ್ಲ
ಹಾನತೆಗೆದೆಳೆಯಲು ತೇರಿಲ್ಲ
ಅಗ್ರವಾಗಿ ಕಂಡದ್ದೆಲ್ಲ ಉಗ್ರವಾಗಿ
ಮರಳಿಗಿಳಿಯಲು ಅಡ್ಡಡ್ಡ ಸೀಳಿ
ಕಾಲ್ತಡೆಸುತ್ತ ವ್ಯಘ್ರವಾಗಿ
ಮಿಸುಕಾಡುವ ನಡಿಗೆ
ಧರೆಗೂ
ತುಸುತಾಪ ಅಡಿಗೆ.
ಜಾರಿಸರಿದವುಗಳು ಹಲವು
ಹಾರಿದವು ಮರೆತು ದೂರ
ಅರೆಮಬ್ಬಿನಲಿ ಮುರಿದ
ರೆಕ್ಕೆಯ ಬಳಚುತ್ತ
ಹಾರಲೆತ್ನಿಸಿದ್ದು ಬರಿ ಕವಿತೆಯಲ್ಲ
ಕೊಳದ ತಿಳಿನೀರಲ್ಲಿ ಕಾಣುವ
ಕಟುವಾಸ್ತವ
ಅದಕ್ಕೆ ನೋವಿದೆ
ಅಲ್ಲಲ್ಲ ತುಸು ನೆಮ್ಮದಿಯಿದೆ
ಮೋಡ ನೀನಳಬೇಡ
ಮುರಿಯದಿರಲಿ ಮತ್ತೊಂದು ರೆಕ್ಕೆ
******
– ರಾಘವೇಂದ್ರ ಹೆಗಡೆ
******
ಕೊ: ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..
******
[image source: picassaweb]
******
ಬಿಂಬ
ವರಾತ ತೆಗೆದ ಮಣ್ಣಿಗೆ ಹರಳಹುಚ್ಚು
ಗಾಳಿ ತೂರಿದ್ದು ಎಲೆಯಿರಬೇಕು
ಅಂದುಕೊಂಡದ್ದು ಕೊಂಚ ಹೆಚ್ಚು
ಊರಾಚೆಯ ತೊರೆ ಕಣ್ಣು ಕುಕ್ಕುವಾಗ
ನೆತ್ತಿ ಸುಡುವ ನಡು ಮಧ್ಯಾನ್ನ್ಹ
ಹನಿ ಹೊತ್ತ ಹೆಸರಲಿ
ಅಲೆಯಬೇಕೆಂದು ಬಿಟ್ಟು ಉದ್ಯಾನ
ಮನಸು ಉರಿವ ಕರ್ಪೂರ
ಹೊತ್ತು ತೇಲುವ ಕೆಸುವಿನೆಲೆ
ಅಕೋ ಆ ತೀರದಿ ತೀರದ ಹೊಸನೆಲೆ?
ಕನ್ನಡಿಯಲ್ಲಿ ಕಂಡ ಮುಖ
ಮುಖವೇ ಹೌದಾ..,? ಅನುಮಾನ
ಮುಖದ ಮೇಲಲ್ಲ ಕನ್ನಡಿಯ ಮೇಲೆ
ಇಟ್ಟರೂ ಮತ್ತೆ ಮತ್ತೆ
ಉಸಿರ ಬೆರಳಚ್ಚು
ಅರೆ ಯಾಕೋ ಬೇರೆಯದೇ
ಕಾಣುವುದಲ್ಲ ಬರೆವ ನೆರಳಚ್ಚು
ಕಾಮನಬಿಲ್ಲು ನೋಡಿದ ಕಣ್ಣು
ನೀರಿಗಿಣುಕಿ ಬಿಂಬಕೆ ಮುಖವೊಡ್ಡಿದರೆ
ಅಲ್ಲಿ ಕಂಡದ್ದು ಮೋಡದಡಿ
ಪದರಪದರವಾಗಿ ಚಡಪಡಿಸುತಿರುವ ಹಗಲು.
******
ಕೊ: ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
******
— ರಾಘವೇಂದ್ರ ಹೆಗಡೆ
ಮತ್ತೊಂದು ರಸ್ತೆ
ನಿರ್ಭೀತ ಹೊರಟ ದಾರಿಗೆ
ವರ್ತುಲ ಸವಾಲು
ಹೇಗೆ ಹೋಗಬೇಕು, ಹೇಗೆ ಹೋಗಬೇಕು
ಅಲೆಗೆ ಸಿಕ್ಕಿ ಬದಿಗೊತ್ತಿ
ಇಂಚಿಂಚು ಸರಿದ ಮರಳ
ರಾಶಿಯೇ ಒಂದುಕಡೆ
ಅಡಿಯ ಪಡಿಯಚ್ಚು ಪಡೆದು
ದಿಬ್ಬದಿಬ್ಬಗಳಾಗಿ ನಿಂತು
ಯಾನಶಬ್ಧ ನಿಶ್ಯಬ್ಧತೀರ.
ಹನಿ ಮೈಮೇಲೆ ಬಿದ್ದಾಗ
ಶಿಥಿಲ ಮಾಡಿನ ಬಗ್ಗೆ ಅನುಕಂಪ
ವರ್ತುಲ ಸುರುಳಿ ಬಿಡಿಸುವಲ್ಲೂ
ಗೋಳಾರ್ಧ ಖಂಡಾರ್ಧ ನೆಪ
ಊರೂರು ಸುತ್ತಿ ಉಸಿರು
ಸೇರುವ ಗಾಳಿಗೆ ಬದುಕು
ವಿಪರೀತ ಸಖ್ಯ; ಅದೇ ಕನಸು.
ಶೂನ್ಯದಿಂದಾರಂಭವಾಗುವುದು
ಎಲ್ಲ ಯಾಕೆ ಅದಕೆ
ಹಾಕುವುದು ನಿರ್ಲಿಪ್ತ ಹೊದಿಕೆ
ಮೇರು, ಪರ್ವ, ಉತ್ತುಂಗ
ಮುಂತಾದ ಗರ್ವ ಹೆಮ್ಮೆ ಪದಗಳ
ಬುನಾದಿ ತುಂಬೆಲ್ಲ
ರಾಶಿರಾಶಿ ಶೂನ್ಯಗಳು.
ಯಾಕೆ ಅಲೆ ಯಾಕೆ ಮಣ್ಣು
ಪದರಪದರಗಳಾಗಿ ತೆರೆದುಕೊಳ್ಳುವ ಕಣ್ಣು
ಅರಸುತ್ತದೆ ವರ್ತುಲದಲ್ಲಿ ಸಂಭಾವ್ಯ
ಪ್ರಶ್ನೆಗೆ ಸಾಂದರ್ಭಿಕ ಉತ್ತರ
ಮತ್ತೆ ಹೊರಟಿದ್ದು ಹಾದಿಯೇ
ಅಲ್ಲ ಅಂದುಕೊಂಡರೆ ದುಸ್ತರ.
ಅಕೋ ಅಲ್ಲಿ ತೋರುತಿದೆ ಒಂದು ಸಂಧಿ
ನಿರ್ಭೀತಿ ಒಳಗೊಳಗೇ ಕೊಂಚ ಬಂಧಿ
ಮತ್ತೆ ಹೇಗೆ ಹೋಗಬೇಕು ಪ್ರಶ್ನೆಯೆದುರು
ದಿಟ್ಟ ಉತ್ತರದಂತೆ ಸುಳಿವ ಶೂನ್ಯ ವರ್ತುಲಗಳು
ಈಗ ಹೊರಡುವುದು ಬಹುಶಃ
ಅರ್ಥವಾಗದ ಅಲ್ಲಿಗೇ ಇರಬಹುದು.
– ರಾಘವೇಂದ್ರ ಹೆಗಡೆ
ಮಳೆ ಎಂಬ ಹನಿವ ಕವಿತೆ..
ನೀಲತೀರದ ಒಡಲ ಹಸಿರಿನಲಿ
ಹೆಸರು ಮರೆತ ಮೋಡ
ಮೊಳಕೆಯೊಡೆದು ಬರುತ ಮಳೆಹನಿ
ಚಟಪಟನೆ ನುಡಿಸುವುದು ಕಾಡನೋಡ..
ಮಳೆಯ ಮಹಿಮೆಯೇ ಹಾಗೆ.. ಮಣ್ಣ ಹುಡಿಯಿಂದ ಕಂಪ ಕುಡಿಸುತ್ತದೆ. ಬಡಕಲು ಬಳ್ಳಿಗೆ ಜೀವಕಳೆಯ ಹಬ್ಬಿಸುತ್ತದೆ. ಮಳೆ ಮೋಡದ ಮೊಗ್ಗು, ಹೂವು.. ಇಂಥ ಹೂವಿನ ಮಧುರ ಸ್ಪರ್ಷಕೆ ಮುದದಿ ಅವತರಿಸುವ ಅದೆಷ್ಟೋ ಹೂಗಳಿವೆ; ಅಕ್ಷರಶಃ ಮಳೆ ಹೂಗಳಿವೆ. ಹನಿಗೆ ಅರಳುವ ಮೊಗ್ಗುಪ್ರಾಣ ಧರೆಯ ಕಣಕಣಕೆ ಜೀವಗಂಧ ಸ್ಪುರಿಸುತ್ತದೆ.
ಒಂದೊಂದಾಗಿ ಬಿಡಿಸಿದರೆ ಮೂಗುತಿಯಂತೆ, ಕಿವಿ ಕುಡುಕಿನಂತೆ ಕಾಣುವ ಬಂದುಳಿಕೆಯ ಹೂಮಾಲೆಯ ಚಿತ್ರ ಇಲ್ಲಿದೆ. ಇದನ್ನು ’ಸೀತಾಳೆ ದಂಡೆ’ ಅಥವಾ ’ಸೀತಾದಂಡೆ’ ಎಂದೂ ಕರೆಯುತ್ತಾರೆ.
******
ಮಲೆನಾಡು – ಕರಾವಳಿ ಈ ಎರಡೂ ಪ್ರದೇಶಗಳಲ್ಲಿ ಬೆರೆತು ಬೆಳೆದು ಬಂದ ನನ್ನಂಥ ಅನೇಕರಿಗೆ ಮಳೆಗಾಲದ ಜಲಪಾತಗಳ ಪರಿಚಯ ಇಲ್ಲದಿಲ್ಲ. ಬೆಟ್ಟಗುಡ್ಡಗಳಲ್ಲಿ ಬೇಸಿಗೆಯಲ್ಲಿ ಕಾಲುದಾರಿಯಂತೆ ಕಡಿದಾದ ಕಲ್ಲು-ಸವಕಲು ಮಾರ್ಗ ಕಂಡರೆ ಅದು ಮಳೆಗಾಲದ ನೀರದಾರಿಯೆಂದೇ ಲೆಕ್ಕ. ಹೀಗೆ ದೊಡ್ಡದೊಡ್ಡ ಕಲ್ಲುಗಳ ಮೇಲಿಂದ ಭೋರ್ಗರೆತದ ಖಾಸಾ ಆಲಾಪದೊಂದಿಗೆ ಧುಮ್ಮಿಕ್ಕುವ ಜಲಧಾರೆ ಮೋಹಕ ಜಲಪಾತವಾಗಿ ಕಣ್ತಣಿಸುತ್ತದೆ. ಇಂಥವುಗಳಿಗೆ ಹೆಸರ ಹಂಗಿಲ್ಲ. ಸೀಮಿತ ಅವಧಿಯ ಕೊಡುಗೆ ಎಂಬಂತೆ ಇವುಗಳನ್ನು ಸೀಮಿತ ಅವಧಿಯ ಜಲಪಾತ ಎನ್ನಬಹುದಷ್ಟೆ!
******
ಮಳೆ, ಹೂವು, ಕವಿತೆ, ಹಕ್ಕಿ, ದುಂಬಿ,.. ಇವುಗಳಿಗೆಲ್ಲ ಏನೋ ಬಿಡಿಸಲಾಗದ ಬಂಧ ಇರುವಂತೆ ಒಮ್ಮೊಮ್ಮೆ ತೋರುತ್ತದೆ. ಇನ್ನೂ ಮುಂದುವರಿದು ತೊಟ್ಟಿಲು,ನಕ್ಷತ್ರ, ಕಡಲು, ಹಿಮರಾಶಿ, ಮಸಣಭೂಮಿಗಳೂ ಒಂದಕ್ಕೊಂದು ಬೆಸೆದುಕೊಂಡಿವೆಯೆಂದೂ, ಅವು ಇವುಗಳಿಗೆ, ಇವು ಅವುಗಳಿಗೆ… ಅಥವಾ ಇವೆಲ್ಲ ಒಂದೇ ಚಕ್ರದ ಸುರುಳಿಗಳೆಂದು, ಕಾಲಘಟ್ಟದ ನಿಲ್ದಾಣಗಳೆಂದು.., ಹೀಗೇ ಒಮ್ಮೊಮ್ಮೆ ಅನಿಸಿದರೆ ಇವುಗಳಲ್ಲೇ ಬೆರೆತ ಬದುಕಿನಿಂದ ಒಂದಷ್ಟು ಆಚೆನಿಂತು ಒಂದು ಬೊಗಸೆ ನಿರಾಳತೆಯ ಮೊಗೆದು ಸ್ವಂತವಾಗಿಸಿಕೊಳ್ಳಬೇಕು ಅನ್ನಿಸುವಷ್ಟು ವ್ಯವಧಾನ ಒಂದೊಮ್ಮೆ ಸಿಕ್ಕರೂ ಮಗದೊಮ್ಮೆ ಕೈಗೆ ಸಿಗದ ದುಂಬಿಯಂತೆ ಹಾರಿ ದೂರದಿಂದ ಜೀವತಣಿಸುವ ಸಾಧ್ಯತೆ, ಸಂಭವನೀಯತೆಗಳ ತ್ರಾಣ ಗೋಚರಕ್ಕೆ ಸಿಗುವಷ್ಟು ಹತ್ತಿರವಾಗುತ್ತದೆ.
******
ಅಕ್ಕನ ಮದುವೆಯ ನೆಪದಲ್ಲಿ ಕೊಂಡ ಹೊಸ ಕ್ಯಾಮರಾ ಫೋಟೊಗ್ರಫಿ ಬಗ್ಗೆ ಒಂದಷ್ಟು ಆಸಕ್ತಿಯನ್ನು ನನ್ನಲ್ಲಿ ತುಂಬುತ್ತಿದೆ. ಮಳೆಗಾಲದ ರಸ್ತೆ, ಕೆಂಪಗೆ ಹರಿವ ಹಳ್ಳ, ಮುಗಿಲ ಮುತ್ತುವ ಮರಗಳು, ಕಡಲ ಕೂಡುವ ನದಿ, ನೆರಳು-ಬೆಳಕು.., ಇವೆಲ್ಲ ಪರಿಚಿತ ಕಣ್ಣಿಗೆ ಮತ್ತೂ ಹೊಸತೇನೋ ಎಂಬಂತೆ ಗೋಚರಿಸಲಾರಂಭಿಸಿವೆ.
******
ಕಾಲ ಬದುಕನ್ನು ನಡೆಸುತ್ತದೆ ಅಥವ ಕಾಲದೊಂದಿಗೆ ಬದುಕು ದಿನದಿನ ಹೊಸ ಮಗ್ಗುಲುಗಳನ್ನು ತೆರೆದುಕೊಳ್ಳುತ್ತ ಅಲ್ಲಲ್ಲಿ ತಿರುವು ಪಡೆದು ನಡೆಯುತ್ತದೆ. ಮರದ ಬೇರು ಭುವಿಯಡಿ ನೀರರಸುವಂತೆ ಹರಿಯುತದೆ ಮನ ಕಾಣದ ಕವಿತೆಯ ಒಡಗೂಡಿ. ದಾರಿ, ನೌಕೆ, ತಿರುವು, ರಸ್ತೆ ಮುಂತಾದ ಖಾಯಂ ಬಳಕೆಯ ಶಬ್ಧಗಳು ಖಾಲಿಯಾದಷ್ಟೂ ಮತ್ತೂ ಉದ್ರಿ ಸಿಗುತ್ತವೆ!
ಊರ ನೆರೆಯ ಹೊಳೆಯಂತೂ ಮೈದುಂಬಿದೆ. ಬೆದರಿಸುವ ಮಣ್ಣುಗೆಂಪು ನೀರನ್ನು ಹುಟ್ಟಿನಿಂದ ಕದಡುತ್ತ ಈಚೆದಡದಿಂದ ಆಚೆಗೆ ಮತ್ತು ಆಚೆದಡದಿಂದ ಈಚೆಗೆ ಜನರನ್ನು ಸಾಗಿಸುವ ದೋಣಿಯವ ವಾಸ್ತವದಿಂದ ಅವಾಸ್ತವತೆಗೂ, ಮಾರ್ಮಿಕತೆಗೂ ಕೊಂಡೊಯ್ದುಬಿಡುತ್ತಾನೆ. ಮೋಹನ ಮುರಳಿಯ ಕರೆಗೆ ಓಗೊಟ್ಟು ಓಡೋಡಿ ಬರುವ ಹಸುಕಂದಮ್ಮಗಳಂತೆ ಅದೆಲ್ಲೋ ದೂರದ ಕಡಲ ಅಲೆಯ ನಾದಕೆ ಮನಸೋತು ಸೆಳೆಯುತ ಹರಿವ ಹನಿಹನಿ ಅಘನಾಶಿನಿ ದಡದುದ್ದಕ್ಕೂ ಜೀವನಾಡಿಯ ಮಿಡಿಸುತ್ತದೆ, ಬದುಕನ್ನು ತೊಟ್ಟಿಕ್ಕಿಸುತ್ತದೆ.
******
ಭಾವುಕತೆಯ ಮಳೆಯಲಿಮಿಂದ ಬಯಲದಾರಿಗೆ ಒದ್ದೆನೋಟವೇ ಗತಿ!
******
– ರಾಘವೇಂದ್ರ ಹೆಗಡೆ




















